Thursday, October 23, 2008

ಅವ್ಯಾಹತ ಕ್ರಿಸ್ತೀಕರಣ: ಎಸ್.ಎಲ್.ಭೈರಪ್ಪ

ಲೇಖಕ: ಎಸ್.ಎಲ್.ಭೈರಪ್ಪ [ವಿಜಯ ಕರ್ನಾಟಕ, ಅಕ್ಟೋಬರ್ ೧೬, ೨೦೦೮ ರಂದು ಪ್ರಕಟವಾದ ಲೇಖನ]


  • “ಸೆಪ್ಟೆಂಬರ್ ೧೧ರ ನಂತರ ಅಮೆರಿಕದಲ್ಲಿ ಒಂದೇ ಒಂದು ಭಯೋತ್ಪಾದಕ ಕೃತ್ಯ ನಡೆದಿಲ್ಲ. ನಮ್ಮಲ್ಲಿ ಪ್ರತಿ ದಿನ ಜನ ಉಗ್ರಗಾಮಿಗಳಿಂದ ಸಾಯುತ್ತಲೇ ಇದ್ದಾರೆ. ನಮ್ಮ ರಾಜಕಾರಣಿಗಳು ಇದನ್ನು ತಡೆಯುವುದು ಕನಸಿನ ಮಾತು.”

  • “ಭಾರತದಲ್ಲಿ ದಿನಕ್ಕೆ ೫೦೦೦ ಜನರು ಕ್ರೈಸ್ತರಾಗಿ ಪರಿವರ್ತಿತರಾಗುತ್ತಿದ್ದಾರೆಂಬ ಒಂದು ಲೆಕ್ಕವಿದೆ. ಚರ್ಚಿಗೆ ಇರುವ ಆದಾಯ ಅಗಾಧವಾದದ್ದು. ಜನ ಬಲವೂ ಅಷ್ಟೇ ಅಗಾಧವಾದದ್ದು. ತಮ್ಮ ಮತ ವಿಸ್ತರಣೆಗಾಗಿ ಇವರು ಇಷ್ಟೊಂದು ಹಣ, ಮಾನವ ಶಕ್ತಿ ಮತ್ತು ಸಂಘಟನಾ ತಂತ್ರಗಳನ್ನೆಲ್ಲ ಯಾಕೆ ಕ್ರೋಡೀಕರಿಸಿ ವ್ಯಯ ಮಾಡುತ್ತಾರೆ?”

  • “ಮತಾಂತರ ಚಟುವಟಿಕೆಯು ತಪ್ಪು ಎಂದು ನಾವು ಹೇಳುತ್ತೇವೆ. ಸರ್ವೋಚ್ಚ ನ್ಯಾಯಾಲಯವೂ ಹೀಗೆಯೇ ವ್ಯಾಖ್ಯೆ ಮಾಡಿದೆ. ಆದರೆ ಅದು ತಪ್ಪೆಂದು ಅವರು ಭಾವಿಸುವುದಿಲ್ಲ. ಧರ್ಮಬೋಧೆಯು ಅವಿಭಾಜ್ಯ ಅಂಗವಾಗಿ ಅವರ ತಲೆಯಲ್ಲಿ ಗಟ್ಟಿಯಾಗಿ ಕೂತಿರುವಾಗ ಅವರು ಬೇರೆ ರೀತಿ ಆಲೋಚಿಸುವುದು ಹೇಗೆ ಸಾಧ್ಯ?”

  • “ಚರ್ಚಿನ ತಂತ್ರವು ಒಂದೊಂದು ಸಂದರ್ಭದಲ್ಲಿ ಒಂದೊಂದು ತೆರನಾಗಿರುತ್ತದೆ. ಬೆದರಿಸುವಲ್ಲಿ ಬೆದರಿಕೆ , ಹಿಂಸಿಸುವಲ್ಲಿ ಹಿಂಸೆ, ನಯಗಾರಿಕೆಯಲ್ಲಿ ನಯ, ಆಮಿಷದಲ್ಲಿ ಪೂರೈಕೆ ಮೊದಲಾಗಿ ಅವರದು ವಿವಿಧ ಸಮಯ ಸಾಧಕ ಮಾರ್ಗಗಳು.”

ನಾಲ್ಕು ಶತಮಾನಗಳಿಂದಲೂ ಸತತವಾಗಿ ಭಾರತದಲ್ಲಿ ನಡೆಯುತ್ತಿರುವ ಕ್ರಿಸ್ತೀಕರಣವು ಸೋನಿಯಾ ಗಾಂಧಿಯ ಪಟ್ಟಾಭಿಷೇಕವಾದ ನಂತರ ಅಗಾಧವಾದ ಪ್ರಮಾಣಕ್ಕೆ ಏರಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯಾದರೂ ಯಾವ ಪತ್ರಿಕೆ ಅಥವಾ ಟಿವಿ ಚಾನೆಲ್ ನವರು ಹಾಗೆಂದು ಸ್ಪಷ್ಟವಾಗಿ ಬರೆದಿಲ್ಲ, ಹೇಳಿಲ್ಲ. ಆದರೆ ಈ ಅಗಾಧತೆಯಿಂದ ಎಚ್ಚೆತ್ತು ಒರಿಸ್ಸಾ, ಕರ್ನಾಟಕ ಮೊದಲಾದ ಕಡೆ ಅಲ್ಲಲ್ಲಿ ಪ್ರತಿಕ್ರಿಯೆಯಾಗುತ್ತಿರುವುದನ್ನು ಎಲ್ಲ ಮಾಧ್ಯಮದವರೂ ಮುಖಪುಟದ ಸುದ್ದಿ ಮಾಡುತ್ತಿರುವುದು, ಜಾತ್ಯತೀತ ಪತ್ರಿಕೆಗಳು, ಎಡಪಂಥದ ಮಾಧ್ಯಮಗಳು ಭಾರತದ ವಿನಾಶವೇ ಸಂಭವಿಸುತ್ತಿದೆ ಎಂಬಂತೆ ಹುಯಿಲೆಬ್ಬಿಸಿ ಮಿಶನರಿಗಳಿಗೆ ಸಹಕಾರಿಯಾಗಿ ವರ್ತಿಸುತ್ತಿರುವುದು ಸಾಧಾರಣ ಓದುಗನಿಗೂ ಅರ್ಥವಾಗುತ್ತದೆ. ಈ ಹುಯಿಲನ್ನು ಸೋನಿಯಾಗಾಂಧಿಯ ಅನುಯಾಯಿಗಳು, ಬುದ್ಧಿಜೀವಿಗಳು, ಜಾತ್ಯತೀತರು, ತಾರಕಕ್ಕೇರಿಸಿ ಹಿಂದೂ ಪರ ಸಂಘಟನೆಗಳು, ಮಠಾಧೀಶರು ಮತ್ತು ಬಿಜೆಪಿ ಸರಕಾರಗಳಿಗೆ ಮಸಿ ಬಳಿಯುವುದು ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ, ವಿಶ್ವಸಂಸ್ಥೆಯ ಮಟ್ಟದಲ್ಲಿ ಭಾರತಕ್ಕೆ ಛೀಮಾರಿ ಹಾಕಿಸಲು ಉದ್ಯುಕ್ತವಾಗಿರುವ ಕ್ರೈಸ್ತ ಸಂಘಟನೆಗಳಿಗ ನೆರವಾಗುತ್ತಿರುವುದೂ ಸ್ಪಷ್ಟವಾಗಿದೆ. ಕೇಂದ್ರ ಸರಕಾರವನ್ನು ಹಿಡಿದುಕೊಂಡಿರುವ ಸೋನಿಯಾ ಗಾಂಧಿಯ ಕಾಂಗ್ರೆಸ್ ಪಕ್ಷವಂತೂ ಈ ಸನ್ನಿವೇಶವನ್ನು ದೊಡ್ಡದು ಮಾಡಿಕೊಂಡು ಕರ್ನಾಟಕ ಮತ್ತು ಒರಿಸ್ಸಾ ಸರಕಾರಗಳನ್ನು ಬರ್ಖಾಸ್ತ್ ಮಾಡುವ ಹುನ್ನಾರವನ್ನೂ ಮಾಡುತ್ತಿದೆ. ಹಾಗೆ ಮಾಡಿದರೆ ಮುಂದಿನ ಚುನಾವಣೆಯಲ್ಲಿ ಜನಗಳು ಬರ್ಖಾಸ್ತುಗೊಂಡ ಸರಕಾರಗಳನ್ನು ಪುನರ್ಪ್ರತಿಷ್ಠಾಪಿಸಿಯಾರೆಂಬ ಲೆಕ್ಕಾಚಾರದಿಂದ ತಡೆದುಕೊಂಡಿದೆ. ಪ್ರತಿಕ್ರಿಯೆಯಾಗಿ ಗಲಭೆ ಮಾಡುತ್ತಿರುವವರು ಭಜರಂಗದಳದವರೆಂದು ಕೇಂದ್ರದ ಆಡಳಿತ ಪಕ್ಷವೂ ಎಡಪಂಥೀಯ ಮತ್ತು ವಿಶೇಷವಾಗಿ ಇಂಗ್ಲಿಷ್ ಮಾಧ್ಯಮವೂ ಥಟ್ಟನೆ ಆಪಾದಿಸುತ್ತಿವೆ. ಆದರೆ ಈ ಗಲಭೆಯಲ್ಲಿ ಭಜರಂಗದಳದ ಪಾತ್ರವೆಷ್ಟು ? ಭಜರಂಗದಳದ ಹೆಸರಿನಲ್ಲಿ ನಡೆಯುವ ಗಲಭೆಗಳೆಷ್ಟು ? ಮಿಶನರಿಗಳ ಆಮಿಷ ಮತ್ತು ಅಪಪ್ರಚಾರಕ್ಕೆ ಒಳಗಾಗಿ ಮತಾಂತರಗೊಂಡವರ ನೆರೆ ಹೊರೆಯವರೇ ಸ್ವಯಂಪ್ರೇರಿತರಾಗಿ ಗಲಭೆ ಮಾಡಿರುವವರೆಷ್ಟು ಎಂಬ ವಿವರಗಳನ್ನು ಯೋಚಿಸುವುದು ಇವರಾರಿಗೂ ಬೇಕಿಲ್ಲ.

ಭಾರತದಲ್ಲಿ ವಾಸಿಸುತ್ತಿರುವ ಫ್ರಾಂಕ್ವಾಗೋತಿಯೆ ಎಂಬ ಫ್ರೆಂಚ್ ಪತ್ರಕರ್ತನು ಸೋನಿಯಾಗಾಂಧಿಯ ಆಡಳಿತದಲ್ಲಿ ನಡೆಯುತ್ತಿರುವ ಕ್ರಿಸ್ತೀಕರಣವನ್ನು ವಿವರಿಸುತ್ತಾ ಅಂಜಿಕೆಯನ್ನು ವ್ಯಕ್ತಪಡಿಸಿದ್ದಾನೆ. ಆತ ಹೇಳುತ್ತಾನೆ;

“ನಾನು ಸ್ವತಃ ಪಾಶ್ಚಿಮಾತ್ಯ ಹಾಗೂ ಹುಟ್ಟಿನಿಂದ ಕ್ರೈಸ್ತ. ಹೆಚ್ಚಾಗಿ ಕ್ಯಾಥೊಲಿಕ್ ಶಾಲೆಗಳಲ್ಲಿ ಬೆಳೆದವನು. ಚಿನ್ನದಂಥ ಮನುಷ್ಯನಾಗಿದ್ದ ನನ್ನ ಚಿಕ್ಕಪ್ಪ ಹೈಗೋತಿಯೇ ಪ್ಯಾರಿಸ್ಸಿನ ಒಂದು ಸುಂದರ ಚರ್ಚಿನ ಅರ್ಚಕನಾಗಿದ್ದ. ಫ್ರ್ರಾನ್ಸಿನಲ್ಲಿ ಪ್ರಸಿದ್ಧ ಕಲಾವಿದನಾಗಿದ್ದ ನನ್ನ ತಂದೆ ಜೀವನವಿಡೀ ನಿಷ್ಠಾವಂತ ಕ್ಯಾಥೊಲಿಕ್. ಅವರು ಪ್ರತಿದಿನ ಚರ್ಚಿಗೆ ಹೋಗುತ್ತಿದ್ದರು...ಆದರೂ ಸೋನಿಯಾಗಾಂಧಿಯ ರಾಜ್ಯಭಾರದಲ್ಲಿ ಕ್ರೈಸ್ತ ಧರ್ಮವು ಎಷ್ಟೊಂದು ಪ್ರಮಾಣದಲ್ಲಿ ಭಾರತವನ್ನು ವಶಕ್ಕೆ ತೆಗೆದುಕೊಳ್ಳುತ್ತಿದೆ ಎಂಬುದನ್ನು ನೋಡಿದಾಗ ನಾನು ಕಸಿವಿಸಿಗೊಳ್ಳುತ್ತೇನೆ. ೨೦೦೧ನೇ ಸೆನ್ಸಸ್ ಪ್ರಕಾರ ಭಾರತದಲ್ಲಿ ೨೩೪ ಲಕ್ಷ ಕ್ರೈಸ್ತರಿದ್ದಾರೆ. ಎಂದರೆ ಶೇಕಡಾ ೨.೫ ರಷ್ಟೂ ಇಲ್ಲ. ಇದೊಂದು ನಗಣ್ಯ ಸಂಖ್ಯೆ. ಆದರೂ ಇಂದು ಭಾರತದಲ್ಲಿ ಐದು ಜನ ಕ್ರೈಸ್ತ ಮುಖ್ಯಮಂತ್ರಿಗಳಿದ್ದಾರೆ- ನಾಗಾಲ್ಯಾಂಡ್, ಮಿಜೋರಾಂ, ಮೇಘಾಲಯ, ಕೇರಳ ಮತ್ತು ಆಂಧ್ರ ಪ್ರದೇಶ. ಸೋನಿಯಾಗಾಂಧಿಯ ಸಮೀಪ ವರ್ತುಲದಲ್ಲಿರುವ ರಾಜಕಾರಣಿಗಳಲ್ಲಿ ಬಹುತೇಕರು ಕ್ರೈಸ್ತರು ಅಥವಾ ಮುಸ್ಲಿಮರು. ಆಕೆಗೆ ಹಿಂದೂಗಳಲ್ಲಿ ನಂಬಿಕೆ ಇಲ್ಲವೆಂದು ತೋರುತ್ತದೆ. ಕ್ರೈಸ್ತಳಾದ ಅಂಬಿಕಾ ಸೋನಿ ಕಾಂಗ್ರೆಸ್ಸಿನ ಜನರಲ್ ಸೆಕ್ರೆಟರಿ, ರಾಜಕೀಯವಾಗಿ ಬಹಳ ಬಲಶಾಲಿಯಾದ ವ್ಯಕ್ತಿ, ಸೋನಿಯಾ ಗಾಂಧಿಗೆ ಹತ್ತಿರದ ಪ್ರವೇಶಾಧಿಕಾರವುಳ್ಳವಳು. ಆಸ್ಕರ್ ಫರ್ನಾಂಡೀಸರು ಕೇಂದ್ರ ಸರಕಾರದ ಕಾರ್‍ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮಂತ್ರಿ. ಮಾರ್ಗರೇಟ್ ಆಳ್ವಾ ಮಹಾರಾಷ್ಟ್ರದಲ್ಲಿ ಭಯ ಹುಟ್ಟಿಸುವಂಥ ಹೆಗ್ಗಳಿಕೆಯವರು. ಕರ್ನಾಟಕವು ವಸ್ತುಶಃ ಎ.ಕೆ. ಆಂಟನಿಯವರ ನಿಯಂತ್ರಣದಲ್ಲಿದೆ; ಅವರ ಕಾರ್ಯದರ್ಶಿಗಳೆಲ್ಲ ದಕ್ಷಿಣ ಭಾರತದ ಕ್ರೈಸ್ತ ಸಂಘಟನೆಯಿಂದ ಬಂದವರು. ಹಿಂದೂ ದ್ವೇಷಿಯಾದ ವಾಲ್ಸನ್ ಥಂಪುವು ಎನ್‌ಸಿಇಆರ್‌ಟಿ (ನ್ಯಾಷನಲ್ ಕೌನ್ಸಿಲ್ ಫಾರ್ ಎಜುಕೇಷನಲ್ ರೀಸರ್ಚ್ ಅಂಡ್ ಟ್ರೈನಿಂಗ್) ಪಠ್ಯಕ್ರಮದ ವಿಮರ್ಶಾ ಸಮಿತಿಯ ಅಧ್ಯಕ್ಷ. ಹಿಂದೂ ಹಿಂಸಕನೆಂದೇ ಪ್ರಸಿದ್ಧನಾದ ಜಾನ್ ದಯಾಳ್ ಸೋನಿಯಾ ಗಾಂಧಿಯಿಂದ ರಾಷ್ಟ್ರೀಯ ಭಾವೈಕ್ಯತಾ ಸಮಿತಿಗೆ ನಾಮಕರಣಗೊಂಡವನು. ಹಿಂದೂ ದ್ವೇಷಿ ಕಾಂಚಾ ಎಲ್ಲಯ್ಯ ಅವರಿಗೆ ವಿಶ್ವಸಂಸ್ಥೆ ಮತ್ತು ಅಮೆರಿಕದ ಸಂಸತ್ತಿನಲ್ಲಿ ಭಾರತದಲ್ಲಿ ಜಾತಿ ಭೇದವಿರುವುದೆಂದೂ, ಅದನ್ನು ಈ ಸಂಸ್ಥೆಗಳು ಕೈಗೆತ್ತಿಕೊಳ್ಳಬೇಕೆಂದೂ ವಶೀಲಿ ಮಾಡಲು ಭಾರತ ಸರಕಾರವು ಅನುಮತಿ ಕೊಟ್ಟಿದೆ....

ಸೋನಿಯಾಗಾಂಧಿ ವಿರುದ್ಧ ನನಗೆ ವೈಯಕ್ತಿಕವಾಗಿ ಏನೂ ಕಹಿ ಭಾವನೆ ಇಲ್ಲ... ಆದರೆ ಆಕೆ ಅಧಿಕಾರದ ಅತ್ಯುನ್ನತ ಸ್ಥಾನದಲ್ಲಿ ತೊಡಗಿದಂದಿನಿಂದ ಕ್ರೈಸ್ತ ಮತಕ್ಕೆ ಪರಿವರ್ತನೆಗೊಳ್ಳುತ್ತಿರುವವರ ಸಂಖ್ಯೆ ನಾಗಾಲೋಟ ಹೊಡೆಯುತ್ತಿದೆ. ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ವಿದೇಶಿ ಮಿಶನರಿಗಳು ಕ್ರೈಸ್ತ ಧರ್ಮ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯವು ಬಂದಾಗ ತ್ರಿಪುರದಲ್ಲಿ ಕ್ರೈಸ್ತರೇ ಇರಲಿಲ್ಲ; ಈಗ ಒಂದು ಲಕ್ಷ ಇಪ್ಪತ್ತು ಸಾವಿರವಿದ್ದಾರೆ. ೧೯೯೧ ರಿಂದ ಅವರ ಸಂಖ್ಯೆಯಲ್ಲಿ ಶೇ. ೯೦ ರಷ್ಟು ಹೆಚ್ಚಳವಾಗಿದೆ. ಅರುಣಾಚಲ ಪ್ರದೇಶದಲ್ಲಿ ಈ ಸಂಖ್ಯೆಯು ಇನ್ನೂ ಎದ್ದು ಹೊಡೆದು ಕಾಣುತ್ತದೆ. ೧೯೨೧ ರಲ್ಲಿ ೧೭೭೦ ಕ್ರೈಸ್ತರಿದ್ದದ್ದು, ಈಗ ಹನ್ನೆರಡು ಲಕ್ಷವಿದ್ದಾರೆ ; ಅಲ್ಲದೇ ೭೮೦ ಚರ್ಚುಗಳಿವೆ. ಆಂಧ್ರ ಪ್ರದೇಶದಲ್ಲಂತೂ ಹೊಸ ಹೊಸ ಚರ್ಚುಗಳು ಪ್ರತಿದಿನವೂ ದೂರದೂರದ ಹಳ್ಳಿಗಳಲ್ಲಿ ತಲೆ ಎತ್ತುತ್ತಿರುವುದು ಮಾತ್ರವಲ್ಲದೆ ತಿರುಪತಿಯಲ್ಲೂ ಕಟ್ಟುವ ಹುನ್ನಾರ ನಡೆದಿದೆ. ಈಶಾನ್ಯ ರಾಜ್ಯಗಳ ಮಿಜೋ, ಬೋಡೋಗಳಂಥ ಹಲವು ಚಳವಳಿಗಳು ಕ್ರೈಸ್ತ ಪ್ರಬಲವಾಗಿರುವುದು ಮಾತ್ರವಲ್ಲದೇ ಮಿಶನರಿಗಳ ಕುಮ್ಮಕ್ಕಿ ನಿಂದಲೇ ನಡೆಯುತ್ತಿವೆ...ಕಳೆದ ಎರಡು ದಶಕಗಳಲ್ಲಿ ಅಸ್ಸಾಮ್ ಮತ್ತು ಮಣಿಪುರಗಳಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರು ದಂಗೆಯಿಂದ ಜೀವ ಕಳೆದುಕೊಂಡಿದ್ದಾರೆ....

ಸರಕಾರದ ಮಾಲೀಕತ್ವದಲ್ಲಿರುವ ಇಂಡಿಯನ್ ಏರ್ ಲೈನ್ಸ್‌ನವರು ದ್ವಾರಕಾ ಪೀಠದ ಸನ್ಯಾಸಿ ಅವಿಮುಕ್ತಾನಂದ ಸರಸ್ವತಿ ಅವರನ್ನು ಕೈಯಲ್ಲಿ ತನ್ನ ಸನ್ಯಾಸದ ಲಾಂಛನವಾದ ಒಂದು ದಂಡವನ್ನು ಹಿಡಿದುಕೊಂಡಿದ್ದರಿಂದ ವಿಮಾನದಿಂದ ಕೆಳಗಿಳಿಸಿದರು. ಅದೊಂದು ಸಣ್ಣ ಬಿದಿರು ತುಂಡು. ಸೋನಿಯಾಗಾಂಧಿಯಂಥ ವಿದೇಶಿಗೆ ರಾಷ್ಟ್ರದ ಪಟ್ಟ ಕಟ್ಟಿದ ಈ ದುರ್ಬಲ ದೇಶದಲ್ಲಲ್ಲದೇ ಇಂಥ ಘಟನೆ ಬೇರೆ ಯಾವ ದೇಶದಲ್ಲಿ ನಡೆಯಲು ಸಾಧ್ಯ?”

ನಾನು ಇಲ್ಲಿ ಫ್ರಾಂಕ್ವಾ ಗೋತಿಯೆ ಅವರ ಲೇಖನದ ಕೆಲವು ವಾಕ್ಯಗಳನ್ನಷ್ಟೇ ಉದ್ಧರಿಸಿದ್ದೇನೆ. (Francois Gautier:www.francoisgautier.com 09343538419/09442123255) .

ಕ್ರೈಸ್ತರ ಧರ್ಮಗುರು ಪೋಪ್ ಭಾರತಕ್ಕೆ ಭೇಟಿ ಕೊಟ್ಟಾಗ ಇಡೀ ಮಾಧ್ಯಮವು ಅದರಲ್ಲೂ ಇಂಗ್ಲಿಷ್ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳು ಎಷ್ಟೊಂದು ಸಂಭ್ರಮಪಟ್ಟವು ? ಸಂಭ್ರಮ ಸೃಷ್ಟಿಸಿದವು ! ಒಬ್ಬ ರಾಷ್ಟ್ರಾಧ್ಯಕ್ಷನಿಗೆ ಸಲ್ಲುವ ಸ್ವಾಗತವನ್ನು ಭಾರತ ಸರಕಾರವು ಸಲ್ಲಿಸಿತು. ಭಾರತದ ರಾಷ್ಟ್ರಾಧ್ಯಕ್ಷರು, ಪ್ರಧಾನಿಯಾದಿಯಾಗಿ ಮಂತ್ರಿ ಗಣವು ಸಾಲುಗಟ್ಟಿ ಅಭಿವಂದಿಸಿತು. ಇವರು ಭಾರತಕ್ಕೆ ಬರುತ್ತಿರುವುದು ನಮ್ಮ ಜನಗಳ ಮತ ಪರಿವರ್ತನೆಗೆ, ಈತನಿಗೆ ದೇಶದಲ್ಲಿ ಪ್ರವೇಶ ಕೊಡಕೂಡದು, ಕೊಟ್ಟರೂ ಸರ್ಕಾರದ ವತಿಯಿಂದ ಸ್ವಾಗತ ನೀಡಕೂಡದು ಎಂದು ಕೆಲವು ಹಿಂದೂ ಸಂಘಟನೆಗಳು ದನಿ ಎತ್ತಿದ್ದಕ್ಕೆ ಇಂಗ್ಲಿಷ್ ಮಾಧ್ಯಮಗಳು ಮತ್ತು ಪ್ರಗತಿಪರರೆಂದು ವೇಷ ಹಾಕುವ ಗುಂಪುಗಳು ಹಿಂದೂ ಮೂಲಭೂತವಾದಿಗಳೆಂದು ಬಾಯಿ ಬಡಿದುಕೊಂಡವು. ಆದರೂ ಈ ಪೋಪ್ ಮಹಾಶಯ ಮಾಡಿದ್ದೇನು? “ಮೊದಲನೆಯ ಸಹಸ್ರಮಾನದಲ್ಲಿ ಶಿಲುಬೆಯನ್ನು ಯೂರೋಪಿನ ನೆಲದಲ್ಲಿ ನೆಟ್ಟಂತೆ, ಎರಡನೆ ಸಹಸ್ರಮಾನದಲ್ಲಿ ಅಮೆರಿಕಗಳು ಮತ್ತು ಆಫ್ರಿಕದಲ್ಲಿ ನೆಟ್ಟಂತೆ, ಮೂರನೆಯ ಸಹಸ್ರಮಾನದಲ್ಲಿ ನಮ್ಮ ನಂಬಿಕೆಯ ಭಾರಿ ಫಸಲನ್ನು ಈ ದೊಡ್ಡ ಮತ್ತು ಸಶಕ್ತ ಖಂಡದಲ್ಲಿ (ಏಷ್ಯಾ) ತೆಗೆಯುತ್ತೇವೆ” ಎಂದು ರಾಜಾರೋಷವಾಗಿ ಘೋಷಿಸಿದರು. ಪೋಪರು ತಮ್ಮ ಉದ್ದೇಶದಲ್ಲಿ ಮುಚ್ಚು ಮರೆ ಮಾಡಲಿಲ್ಲ. ಆದರೆ ಹಿಂದೂ ಸಂಘಟನೆಗಳನ್ನು ಮೂಲಭೂತವಾದಿಗಳೆಂದು ಬಾಯಿ ಬಡಿದುಕೊಂಡಿದ್ದ ಮಾಧ್ಯಮದವರು ಮತ್ತು ಪ್ರಗತಿಶೀಲ ವೇಷಧಾರಿಗಳು ಸದ್ಯಕ್ಕೆ ಜಾಣ ಮೌನ ತಾಳಿದರು.

ಮೊದಲಿನಿಂದಲೂ ಕ್ರೈಸ್ತ ಮತದ ಸೋಂಕಿಲ್ಲದೆ ತಮ್ಮ ತಮ್ಮ ಮೂಲ ಮತಗಳನ್ನು ಅನುಸರಿಸಿಕೊಂಡು ಬದುಕುತ್ತಿದ್ದ ಈ ಕೆಳಕಂಡ ದೇಶಗಳು ಆಕ್ರಮಣಕಾರಿ ಮಿಶನರಿಗಳ ತಂತ್ರಗಳಿಂದ ಕ್ರೈಸ್ತರಾಗಿರುವ ಶೇಕಡವಾರು ಸಂಖ್ಯೆಯು ಈ ರೀತಿ ಇದೆ : ಅಂಗೋಲಾ ಶೇಕಡ ೯೦, ಬುರುಂಡಿ ಶೇಕಡ ೭೮, ಕೆಮರೂನ್ ಶೇಕಡ ೩೫, ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ಶೇಕಡ ೮೨, ಚಾದ್ ಶೇಕಡ ೩೩, ಕಾಂಗೋ ಶೇಕಡ ೬೨, ಪೂರ್ವ ತೈಮೂರ್ ಶೇ.೯೮, ಇಥಿಯೋಪಿಯಾ ಶೇ.೫೨, ಈಕ್ವಟೋರಿಯಲ್‌ಗಿನಿ ಶೇ. ೯೪, ಗಬನ್ ಶೇ.೭೯, ಕೆನ್ಯ ಶೇ.೨೫, ಲೈಬೀರಿಯಾ ಶೇ.೬೮, ಮೊಸಾಂಬಿಕ್ ಶೇ.೩೧, ನೈಜೀರಿಯಾ ಶೇ.೫೨, ಪಾಪುವಾ ನ್ಯೂಗಿನೀ ಶೇ.೯೭, ಫಿಲಿಪ್ಪೀನ್ಸ್ ಶೇ.೮೪, ರುವಾಂಡ ಶೇ.೬೯, ದಕ್ಷಿಣ ಆಫ್ರಿಕ ಶೇ.೭೮, ದಕ್ಷಿಣ ಕೊರಿಯಾ ಶೇ.೪೯, ಸೂಡಾನ್ ಶೇ.೩೦, ತಾಂಜಾನಿಯಾ ಶೇ.೨೦, ಟೋಗೋ ಶೇ.೨೩, ಉಗಾಂಡಾ ಶೇ.೭೦, ಜೈರೆ ಶೇ.೯೦.

ಮಿಶನರಿ ಕೆಲಸಗಳಿಗೆ ಅಮೆರಿಕದಿಂದ (USA) ವರ್ಷಕ್ಕೆ ೧೪೫ ಬಿಲಿಯನ್ ಡಾಲರ್ ಹರಿದು ಬರುತ್ತದೆ. ಇಡೀ ಪ್ರಪಂಚದಲ್ಲಿ ಚರ್ಚುಗಳು ೧.೧ ಬಿಲಿಯನ್ ಡಾಲರ್‌ಗಳನ್ನು ಮತ ಪರಿವರ್ತನೆಯನ್ನು ಗುರಿಯಾಗಿಟ್ಟುಕೊಂಡ ಸಂಶೋಧನೆಗೆ ಖರ್ಚು ಮಾಡುತ್ತವೆ. ಇವುಗಳು ೩೦೦ ಭಾಷೆಗಳಲ್ಲಿ ೧೮೦ ವಿಷಯಗಳನ್ನು ಕುರಿತದ್ದಾಗಿರುತ್ತವೆ. ಪುಸ್ತಕ ಅಥವಾ ಲೇಖನಗಳು ೫೦೦ ಭಾಷೆಗಳಲ್ಲಿ ಪ್ರಕಟವಾಗುತ್ತವೆ. ಅವುಗಳ ಒಟ್ಟು ಸಂಖ್ಯೆ ೧೭೫೦೦೦. ಪ್ರತಿಯೊಬ್ಬ ವ್ಯಕ್ತಿಯ ಮತ ಪರಿವರ್ತನೆಗೂ ಒಟ್ಟು ೩,೩೦೦೦ ಡಾಲರ್‌ಗಳು ಖರ್ಚಾಗುತ್ತವೆ. ಈ ಮೊತ್ತವು ಪರಿವರ್ತಿತನಾಗುವವನಿಗೆ ಸೇರುತ್ತದೆಂದಲ್ಲ. ಪರಿವರ್ತನಾ ಚಟುವಟಿಕೆಗಳ ಆಡಳಿತ, ಯೋಜನೆ, ಕಾರ್ಯಾಚರಣೆ ಇವುಗಳ ಒಟ್ಟು ಲೆಕ್ಕದಲ್ಲಿ ಈ ಖರ್ಚನ್ನು ಲೆಕ್ಕ ಹಾಕಲಾಗಿದೆ. ಕ್ರಿ.ಶ. ೧೫೦೦ರಲ್ಲಿ ಮಿಶನರಿ ಕಾರ್ಯದಲ್ಲಿ ತೊಡಗಿಸಿಕೊಂಡ ಕ್ರೈಸ್ತರ ಸಂಖ್ಯೆ ಮೂವತ್ತು ಲಕ್ಷವಿತ್ತು.. ಈಗ ಅದು ೬೪.೮ ಕೋಟಿಯಾಗಿದೆ. ಅದರಲ್ಲಿ ಶೇ.೫೪ ಬಿಳಿಯೇತರರೇ ಆಗಿದ್ದಾರೆ. ಎಂದರೆ ಬಿಳಿಯೇತರರಿಗೆ ತರಬೇತಿ ಕೊಟ್ಟು, ಹಣ ಪ್ರಭಾವಗಳನ್ನು ಒದಗಿಸಿ ಮಿಶನರಿ ಕೆಲಸಗಳಲ್ಲಿ ತೊಡಗಿಸುವುದು ಈ ತಂತ್ರವಾಗಿದೆ. ಇದು ಬ್ರಿಟಿಷರ ಕಾಲದಲ್ಲಿ ಭಾರತೀಯರನ್ನು ಸೈನಿಕರಾಗಿ ನೇಮಿಸಿಕೊಂಡು ಸರಿಯಾದ ಸಂಬಳ ಸಾರಿಗೆ ಕೊಟ್ಟು ಭಾರತವನ್ನು ಆಳಲು ಬಳಸಿಕೊಳ್ಳುತ್ತಿದ್ದಂತೆ.

ಇದರಿಂದ ಯಾವ ಅಧ್ಯಾತ್ಮ ಸಾಧನೆಯಾಗುತ್ತದೆ? ಭಾರತೀಯರಿಗೆ ಇದು ಅರ್ಥವಾಗದ ಸಮಸ್ಯೆ. ಏಕೆಂದರೆ ಭಾರತೀಯರಿಗೆ ಅಧ್ಯಾತ್ಮವೆಂದರೆ ಕಾಡಿನ ಪರ್ಣಶಾಲೆಯಲ್ಲಿ, ಬೆಟ್ಟದ ಗುಹೆಗಳಲ್ಲಿ, ಹಿಮಾಲಯದ ಹೆಪ್ಪುಗಟ್ಟಿಸುವ ಎತ್ತರದಲ್ಲಿ ಕುಳಿತು ಅಂತರ್ಮುಖಿಯಾಗುವ ಸಾಧನೆ . ತನ್ನೊಳಗೆ ಬೆಳಕು ಸಾಧಿಸುವ ಮುನ್ನ ಅನ್ಯರಿಗೆ ಉಪದೇಶ ಮಾಡುವ ಅಧಿಕಾರವಿರುವುದಿಲ್ಲ. ಉಪದೇಶ ಮಾಡುವುದಾದರೂ ಏನನ್ನು? ಅಂತರ್ಮುಖಿಯಾಗು. ನಿನ್ನನ್ನು ನೀನು ಅರಿ. ಧರ್ಮವೆಂದರೆ ಈ ಅರಿವು. ಅದನ್ನು ವಿವರಿಸುವ ರೀತಿಗೆ ಜಿಜ್ಞಾಸೆ ಎಂದು ಹೆಸರು. ಆದರೆ ಕ್ರೈಸ್ತಮತದ ತಿರುಳಾಗಲಿ, ರೀತಿಯಾಗಲಿ ಅದಲ್ಲ.

ಕ್ರೈಸ್ತ ಮತವನ್ನು ಅರ್ಥಮಾಡಿಕೊಳ್ಳಬೇಕಾದರೆ ಸೆಮೆಟಕ್ ರಿಲಿಜನ್‌ಗಳ ಗುಣಲಕ್ಷಣಗಳನ್ನು ನಾವು ತಿಳಿಯಬೇಕು. ಇವುಗಳನ್ನು ಪ್ರವಾದಿ ಮತಗಳು (Prophetic Religions) ಎಂದು ಕೂಡ ಕರೆಯುತ್ತಾರೆ. ಎಂದರೆ ಈ ಮತಗಳು ಒಬ್ಬೊಬ್ಬ ಪ್ರವಾದಿಯಿಂದ ಸ್ಥಾಪಿತವಾದವು. ಪ್ರವಾದಿ ಅಬ್ರಹಾಮನಿಂದ ಸ್ಥಾಪಿತವಾದ ಎಹೂದಿ ಮತವು ಮೂಲ. ಅದರ ಪರಿವರ್ತಿತ ರೂಪವೇ ಏಸುವಿನಿಂದ ಸ್ಥಾಪಿತವಾದ ಕ್ರೈಸ್ತ ಮತ. ಅನಂತರ ಅದೇ ಅಬ್ರಹಾಮನ ಮತದ ಎಷ್ಟೋ ಗುಣಲಕ್ಷಣಗಳನ್ನು ಅಳವಡಿಸಿಕೊಂಡು ಪ್ರವಾದಿ ಮಹಮ್ಮದರಿಂದ ಸ್ಥಾಪಿತವಾದದ್ದು ಇಸ್ಲಾಂ. ಈ ಮೂರೂ ಪ್ರವಾದಿ ಮತಗಳಲ್ಲಿರುವ ಸಾಮಾನ್ಯ ಅಂಶವೆಂದರೆ : ದೇವರು ನಿಮಗೆ ನೇರವಾಗಿ ಲಭ್ಯನಲ್ಲ. ನೀವು ಮೂಲತಃ ಪಾಪಿಗಳು. ದೇವರು ಮಹಾ ಭಯಂಕರ, ಮಹಾಕ್ರೂರ ಶಿಕ್ಷೆಯನ್ನು ಮುಲಾಜಿಲ್ಲದೆ ಕೊಡುವವನು. ಪ್ರವಾದಿಯಾದ ನನ್ನನ್ನು ನಂಬಿ ನನ್ನ ಬೋಧೆಯಂತೆ ನಡೆದರೆ ನಿನಗೆ ಸತ್ತ ನಂತರ ಘೋರ ನರಕಕ್ಕೆ ಬೀಳುವುದನ್ನು ತಪ್ಪಿಸಿಕೊಳ್ಳುವ ಅವಕಾಶವುಂಟು. ಇಲ್ಲದಿದ್ದರೆ ಕೊನೆ ಇಲ್ಲದ ನೋವಿನ ನರಕ ಕಟ್ಟಿಟ್ಟದ್ದು. ನೀನು ನಂಬಬೇಕು. ಇತರರನ್ನು ನಂಬಿಸಬೇಕು. ಎಲ್ಲೆಲ್ಲಿಯೂ ಹೋಗಿ ಬಲ ಪ್ರಯೋಗವನ್ನಾದರೂ ಮಾಡಿ ನಂಬುವವರನ್ನು ಹೆಚ್ಚಿಸಬೇಕು. ಅದೇ ಧರ್ಮ, ಅದೇ ನೀತಿ. ನಂಬದವರನ್ನು ಹಿಂಸಿಸಿ ಕೊಲ್ಲುವ, ಗುಲಾಮರನ್ನಾಗಿ ತುಳಿದು ದುಡಿಸಿಕೊಳ್ಳುವ ವಿಧಾನವನ್ನು ಪ್ರವಾದಿ ಮಹಮದರು ಬೋಧಿಸಿದರು. ಈ ಬೋಧನೆಯು ಹಲವು ಕಡೆಗಳಲ್ಲಿ ಪ್ರಖರವಾಗಿ ಪ್ರಧಾನವಾಗಿ ಕುರಾನಿನ ಅವಿಭಾಜ್ಯ ಅಂಗವಾಗಿದೆ. ಅನ್ಯಮತಗಳ ದೇವರುಗಳನ್ನು ಯಾವ ಪ್ರವಾದಿಯೂ ಸಹಿಸುವುದಿಲ್ಲ. ನನ್ನ ‘ಆವರಣ’ ಕಾದಂಬರಿಯಲ್ಲಿ ಈ ಗುಣಲಕ್ಷಣಗಳನ್ನು ಚಿತ್ರಿಸಿದ್ದೇನೆ.

ಸಮರ್ಪಕ ಉತ್ತರ ಇಲ್ಲ

ಏಸುವೂ ಇಂಥ ಒಬ್ಬ ಪ್ರವಾದಿಯೇ.. ಆದರೆ ಅವನು ಪ್ರವಾದಿ ಅಬ್ರಹಾಮನ ಬೋಧನೆಗಿಂತ ಭಿನ್ನವಾದ ತಾಳ್ಮೆ ಮತ್ತು ಪ್ರೇಮವನ್ನು ಬೋಧಿಸಿದನೆಂದು ಪ್ರತೀತಿ. ವಾಸ್ತವವಾಗಿ ಏಸುವೆಂಬ ಒಬ್ಬ ವ್ಯಕ್ತಿ ಇದ್ದನೇ ಎಂಬ ಸಂಶಯವು ಸಂಶೋಧಕರಲ್ಲಿದೆ. ಇದ್ದಿದ್ದರೂ ಅವನು ಬೈಬಲಿನ ಹೊಸ ಒಡಂಬಡಿಕೆಯಲ್ಲಿ ಚಿತ್ರಿತವಾಗಿರುವಂತೆ ಇದ್ದನೇ? ಎಂಬ ಇನ್ನೊಂದು ಸಂಶಯವೂ ಪ್ರಬಲವಾಗಿದೆ. Dead Sea Scrolls ಸಂಶೋಧನೆಯಾದ ನಂತರ ಈ ಸಂಶಯವು ತುಂಬ ಗಟ್ಟಿಯಾಗಿದೆ. ವಾಸ್ತವವಾಗಿ ಕ್ರೈಸ್ತ ಧರ್ಮಕ್ಕೆ ಈಗಿರುವ ಸ್ವರೂಪವನ್ನು ಕೊಟ್ಟವನು ಚರ್ಚಿನ ಸ್ಥಾಪಕನಾದ ಪಾಲ್. ಅದು ಏನೇ ಇರಲಿ, ನೀವು ಬೈಬಲನ್ನು ನಂಬದಿದ್ದರೆ ನಿಮಗೆ ಮಹಾಘೋರ ನರಕವೇ ಗತಿ ಎಂಬ ವಿಷಯದಲ್ಲಿ ಬೈಬಲಿಗೂ ಕುರಾನಿಗೂ ವ್ಯತ್ಯಾಸವಿಲ್ಲ. ನಮ್ಮ ಏಸುವನ್ನು ಶಿಲುಬೆಗೆ ಏರಿಸಿದವರು ಎಹೂದಿಗಳು ಎಂಬ (ತಪ್ಪು) ಗ್ರಹಿಕೆಯಿಂದ ಆನಂತರ ಪ್ರಬಲರಾದ ಕ್ರೈಸ್ತರು, ಎಹೂದಿಗಳನ್ನು ಹಿಂಸಿಸತೊಡಗಿ, ಬಲವಂತ ಮತಾಂತರಗೊಳಿಸಿ, ಮತಾಂತರಕ್ಕೆ ಒಪ್ಪದವರನ್ನು ಮತ್ತಷ್ಟು ಹಿಂಸಿಸಿದ್ದರಿಂದ ಎಹೂದಿಗಳು ಬೇರೆಯವರನ್ನು ಮತಾಂತರಿಸಲು ಹೋಗಲಿಲ್ಲ. ಅಷ್ಟು ಮಾತ್ರವಲ್ಲ, ಆರಂಭ ಕಾಲದಿಂದಲೇ ಎಹೂದಿ ಧರ್ಮೀಯರು ಬೇರೆಯವರಿಂದ ಹಿಂಸೆಯನ್ನನುಭವಿಸಿದರು. ಇವತ್ತೂ ಅನುಭವಿಸುತ್ತಿದ್ದಾರೆ. ಹಿಟ್ಲರನು ಅರವತ್ತು ಲಕ್ಷ ಯಹೂದಿಗಳನ್ನು ಅನಿಲ ಕೋಣೆ (ಗ್ಯಾಸ್ ಚೇಂಬರ್)ಗಳಲ್ಲಿ ಕೊಲ್ಲುತ್ತಿದ್ದುದು ಆಗ ಪೋಪರಾಗಿದ್ದ ೧೨ನೇ ಪಯಸ್‌ಗೆ ಗೊತ್ತಿತ್ತು. ಪೋಪ್ ಪಯಸನು ‘ಹಿಟ್ಲರನ ಪೋಪ್’- ಎಂದೇ ಕುಖ್ಯಾತನಾಗಿದ್ದಾನೆ. ಅವರು ಮನಸ್ಸು ಮಾಡಿದ್ದರೆ ಕ್ರೈಸ್ತನಾದ ಹಿಟ್ಲರನಿಗೆ ಹೇಳಿ ಆ ಮಹಾಸಾಮೂಹಿಕ ಕೊಲೆಯನ್ನು ಸ್ವಲ್ಪಮಟ್ಟಿಗಾದರೂ ನಿಲ್ಲಿಸಬಹುದಿತ್ತು. ಆದರೆ ನಮ್ಮ ಏಸುವನ್ನು ಶಿಲುಬೆಗೆ ಏರಿಸಿದ ಆ ಜನಾಂಗದವರು ಸಾಯಲಿ ಎಂದು ಪೋಪರು ಸುಮ್ಮನಿದ್ದರು ಎಂಬ ಆಪಾದನೆಯು ಪ್ರಬಲವಾಗಿದೆ. ಅದಕ್ಕೆ ಕ್ರೈಸ್ತರು ಸಮರ್ಪಕ ಉತ್ತರ ಕೊಟ್ಟಿಲ್ಲ.

ಗೋವಾ ಇನ್‌ಕ್ವಿಸಿಶನ್ (Goa Inquisition)ಎಂದು ಕುಪ್ರಸಿದ್ಧವಾಗಿರುವ, ಮತಾಂತರಕ್ಕೆ ಒಪ್ಪದವರನ್ನು ಪೋರ್ಚ್‌ಗೀಸ್ ಪಾದ್ರಿಗಳು (೧೫೬೦ರಿಂದ ೧೮೧೭ರ ನಡುವಿನ ಇನ್ನೂರಐವತ್ತೆರಡು ವರ್ಷಗಳ ಅವಧಿಯಲ್ಲಿ) ಮಾಡುತ್ತಿದ್ದ ಕ್ರೂರ ಹಿಂಸೆಗಳ ವಿವರಗಳು ದಾಖಲಾಗಿವೆ. ಈ ಇನ್‌ಕ್ವಿಸಿಶನ್ ಕಾನೂನುಗಳು ೨೩೦ ಪುಟಗಳಷ್ಟು ದೊಡ್ಡದಾಗಿದ್ದವು. (Inquisition= ತನಿಖೆ, ಹಿಂಸಾತ್ಮಕ ತನಿಖೆ). ಸ್ಟಾಲಿನ್ ಮಾಡುತ್ತಿದ್ದ ಕ್ರೂರ ಹಿಂಸಾತ್ಮಕ ತನಿಖೆಯ ವಿಧಾನಗಳು ಕ್ರೈಸ್ತ inquisition ತನಿಖೆಗಳ ಮಾದರಿಯಿಂದ ಅಳವಡಿಸಿಕೊಂಡವು. ಗೋವಾದಲ್ಲಿ ಈ ತನಿಖೆಯನ್ನು ದೊಡ್ಡಮನೆ ಎಂಬಲ್ಲಿ ಕಿಟಕಿ ಬಾಗಿಲುಗಳನ್ನು ಮುಚ್ಚಿ ಮಾಡುತ್ತಿದ್ದರು. ಏಸುವನ್ನು ನಂಬುವುದಿಲ್ಲವೆಂದು ಹೇಳುವವನು ಸೈತಾನನ ಪ್ರಭಾವಕ್ಕೆ ಒಳಗಾದವನೇ ಇರಬೇಕು. ಶಿಕ್ಷೆಯಿಂದ ಅವನ ಬಾಯಿ ಬಿಡಿಸಬೇಕು, ಎಂದು ನಂಬದ ಗಂಡಸು, ಹೆಂಗಸು ಮತ್ತು ಮಕ್ಕಳನ್ನು ನಾನಾತರಹದ ಕ್ರೌರ್ಯಕ್ಕೆ ಒಳಪಡಿಸುತ್ತಿದ್ದರು. ರಾತ್ರಿಯ ನಿಶ್ಯಬ್ದದಲ್ಲಿ ಈ ಬಲಿಮಾನವರು ನೋವಿನಿಂದ ಚೀತ್ಕರಿಸುತ್ತಿದ್ದುದು ಕೇರಿಯ ಇತರರಿಗೂ ಕೇಳಿಸುತ್ತಿತ್ತು. ಅವರಿಗೆ ಚಾವಟಿಯಿಂದ ಬಾರಿಸುತ್ತಿದ್ದರು. ಅವರ ದೇಹದ ಅಂಗಗಳನ್ನು ಹರಿಯುತ್ತಿದ್ದರು. ಮುರಿಯುತ್ತಿದ್ದರು. ಕಣ್ಣು ರೆಪ್ಪೆಗಳನ್ನು ಕೀಳುತ್ತಿದ್ದರು. ಕೈ ಕಾಲುಗಳ ತುದಿಗಳನ್ನು ಸ್ವಲ್ಪಸ್ವಲ್ಪವಾಗಿ ಕತ್ತರಿಸುತ್ತಿದ್ದರು. ಇವೆಲ್ಲವನ್ನೂ ಆತನ (ಅವಳ) ಬಂಧುಗಳೆದುರಿಗೇ ಮಾಡುತ್ತಿದ್ದರು.

ಡೈಯಾಗೋ ಡಿ ಬೋರ್ಡೋ ಎಂಬ ಕ್ರೈಸ್ತ ಪೂಜಾರಿ ಮತ್ತು ಚರ್ಚುಗಳ ಪ್ರಾಂತ್ಯಾಧಿಕಾರಿ ಮಿಗ್ವೆಲ್‌ವಾಜ್ ಎಂಬುವವರು ಹಿಂದೂಗಳನ್ನು ಹಿಂಸಿಸುವ ೪೧ ಅಂಶಗಳ ಯೋಜನೆಯನ್ನು ಸಿದ್ಧಪಡಿಸಿದರು. ಈ ಯೋಜನೆಯಡಿಯಲ್ಲಿ ಗೋವಾದ ವೈಸ್‌ರಾಯ್ ಆಗಿದ್ದ ಅಂಟಾನೋಡಿ ನೊರೋನ್ಹಾನು ೧೫೬೬ರಲ್ಲಿ ಪೋರ್ಚುಗೀಸ್ ಆಳ್ವಿಕೆಯಲ್ಲಿದ್ದ ಇಡೀ ಪ್ರದೇಶಕ್ಕೆ ಅನ್ವಯವಾಗುವಂತೆ ಕೆಳಕಂಡ ಹುಕುಂ ಅನ್ನು ಜಾರಿ ಮಾಡಿದ. “ನಾನು ಈ ಮೂಲಕ ಹುಕುಂ ಮಾಡುವುದೇನೆಂದರೆ ನನ್ನ ದೊರೆಯ ಆಡಳಿತದಲ್ಲಿರುವ ಪ್ರದೇಶದಲ್ಲಿ ಯಾರೂ ಒಂದೂ ಹಿಂದೂ ದೇವಾಲಯವನ್ನು ಕಟ್ಟಕೂಡದು: ಈಗಾಗಲೇ ಕಟ್ಟಿರುವ ಯಾವ ದೇವಾಲಯದ ದುರಸ್ತಿಯನ್ನೂ ನನ್ನ ಅನುಮತಿ ಇಲ್ಲದೆ ಮಾಡಕೂಡದು. ಈ ಹುಕುಂ ಅನ್ನು ಉಲ್ಲಂಘಿಸಿದರೆ ಆ ದೇವಾಲಯಗಳನ್ನು ನಾಶಪಡಿಸಿ ಅವುಗಳಲ್ಲಿರುವ ವಸ್ತುಗಳನ್ನು ಪುಣ್ಯ ಕೆಲಸಗಳಿಗೆ ಬಳಸಿಕೊಳ್ಳಲಾಗುವುದು.”

ಇದಲ್ಲದೆ ಅವರು ಹುಕುಂ ಮಾಡಿದ ಇನ್ನೂ ಕೆಲವು ಉದಾಹರಣೆಗಳು: ಹಿಂದೂಗಳ ಮದುವೆಯಲ್ಲಿ ಯಾವ ವಾದ್ಯವನ್ನೂ ಬಾರಿಸಕೂಡದು. ವೀಳ್ಯಶಾಸ್ತ್ರದಲ್ಲಿ ಗಂಡು ಮತ್ತು ಹೆಣ್ಣಿನ ಯಾವ ಸಂಬಂಧಿಗಳನ್ನೂ ಕರೆಯಕೂಡದು. ಮದುವೆಯಲ್ಲಿ ಯಾರಿಗೂ ವೀಳ್ಯ ಕೊಡ ಕೂಡದು. ಹೂವು ಹಣ್ಣು ಅಡಕೆ ಮೊದಲಾದವನ್ನು ಹೆಣ್ಣು ಮತ್ತು ಗಂಡಿನ ಮನೆಗಳಿಗೆ ಕಳಿಸಬಾರದು. ಕುಲದೇವತೆಗಳ ಪೂಜೆ ಮಾಡಕೂಡದು: ಪದ್ಧತಿಯಂತೆ ಮದುವೆಗೆ ಮೊದಲು ಭತ್ತ ಕುಟ್ಟುವ , ಸಂಬಾರ ಪದಾರ್ಥಗಳನ್ನು ಪುಡಿ ಮಾಡುವುದಾಗಲಿ ಕೂಡದು: ಪೆಂಡಾಲ್ ಹಾಕಕೂಡದು. ಯಾರಾದರೂ ಸತ್ತಾಗ ವೈಕುಂಠ ಸಮಾರಾಧನೆ ಅಥವಾ ಗಣಾರಾಧನೆ ಮಾಡಕೂಡದು. ಸತ್ತ ಹನ್ನೆರಡನೆ ದಿನದ ಶಾಸ್ತ್ರವನ್ನು ಮಾಡಕೂಡದು. ಏಕಾದಶಿಯಂದು ಉಪವಾಸ ಮಾಡಕೂಡದು. ಹಿಂದೂ ಗಂಡಸರು ಯಾವತ್ತೂ ಪಂಚೆ ಉಡಕೂಡದು: ಹೆಂಗಸರು ರವಿಕೆ ತೊಡಕೂಡದು: ಮನೆಯ ಮುಂದಾಗಲಿ, ಹಿತ್ತಲಲ್ಲಾಗಲಿ, ತೋಟಗಳಲ್ಲಾಗಲಿ ಎಲ್ಲೂ ತುಳಸಿಯನ್ನು ಬೆಳೆಸಕೂಡದು. ಯಾರೂ ಹಿಂದೂ ಹೆಸರನ್ನಾಗಲಿ ಮನೆತನದ ಹೆಸರನ್ನಾಗಲಿ ಉಪಯೋಗಿಸಕೂಡದು.

೧೫೭೦ನೇ ಸೆಪ್ಟೆಂಬರ್ ೨೨ ರಂದು ಜಾರಿ ಮಾಡಿದ ಹುಕುಂ ಪ್ರಕಾರ ಕ್ರೈಸ್ತ ಧರ್ಮಕ್ಕೆ ಸೇರಿದ ಹಿಂದೂಗಳಿಗೆ ಹದಿನೈದು ವರ್ಷ ಕಾಲ ಸಮಸ್ತ ತೆರಿಗೆಗಳಿಂದಲೂ ವಿನಾಯಿತಿ ದೊರೆಯುತ್ತಿತ್ತು.

ಹೀಗೆಯೇ ಬರೆಯುತ್ತಾ ಹೋದರೆ ಈ ಸಣ್ಣ ಲೇಖನದಲ್ಲಿ ಸ್ಥಳ ಸಾಲುವುದಿಲ್ಲ. ಓದುಗರು A.K.PRIOLKAR ಅವರು ಬರೆದಿರುವ THE GOA INQUISITION (Voice of India. New Delhi) ಎಂಬ ಗ್ರಂಥವನ್ನು ಪೂರ್ತಿ ಓದಬೇಕು. ಈ ಗ್ರಂಥದ 79-80-81-82-83-84 ಪುಟಗಳ ಭರ್ತಿ ಮಿಶನರಿಗಳು ನಾಶ ಮಾಡಿದ ಹಿಂದೂ ದೇವಸ್ಥಾನಗಳ ಮತ್ತು ಅವುಗಳು ಇದ್ದ ಊರುಗಳ ಹೆಸರುಗಳಿವೆ. ಈ ಗ್ರಂಥದ ಕೊನೆಯಲ್ಲಿ ಸಮಕಾಲೀನ ಪೋರ್ಚುಗೀಸರೇ ಬರೆದ ಆಧಾರ ಗ್ರಂಥಗಳ ದೊಡ್ಡ ಪಟ್ಟಿಯೇ ಇದೆ. ಮತಾಂತರಕ್ಕೆ ಒಪ್ಪದವರಿಗೆ ಕೊಡುತ್ತಿದ್ದ ಕ್ರೂರ ಹಿಂಸೆ ಮತ್ತು ದೇವಾಲಯ ನಾಶಗಳಲ್ಲಿ ಈ ಕ್ರೈಸ್ತರಿಗೂ ಭಾರತದಲ್ಲಿ ಇದೇ ಕೆಲಸ ಮಾಡಿದ ಮುಸಲ್ಮಾನ ದೊರೆಗಳಿಗೂ ಯಾವ ವ್ಯತ್ಯಾಸವೂ ಇಲ್ಲ. ತಮ್ಮ ಧರ್ಮವನ್ನು ಬಿಡದೆ ಜೀವಿಸಲು ಗೋವೆಯ ಲಕ್ಷಾಂತರ ಜನರು ಪಕ್ಕದ ಕರ್ನಾಟಕ, ಮಹಾರಾಷ್ಟ್ರ ಮತ್ತು ಕೇರಳಗಳಿಗೆ ಓಡಿ ಹೋದರು. ಅವರೇ ಈಗ ತಮ್ಮನ್ನು ತಾವು ಕೊಂಕಣಿ ಹಿಂದೂಗಳೆಂದು ಗುರುತಿಸಿಕೊಳ್ಳುವವರು. ಬ್ರಾಹ್ಮಣರಲ್ಲಿ ಜಿಎಸ್‌ಬಿ (ಜಿಎಸ್‌ಬಿ = ಗೌಡ ಸಾರಸ್ವತ ಬ್ರಾಹ್ಮಣ) ಮತ್ತು ಸಾರಸ್ವತರೆಂದು ಪ್ರಸಿದ್ಧರಾದವರೂ ಹೀಗೆ ಓಡಿ ಬಂದು ತಮ್ಮ ಧರ್ಮ ಸಮೇತ ಜೀವ ಉಳಿಸಿಕೊಂಡವರ ವಂಶಜರು.

ಪ್ರಸಿದ್ಧ ಇತಿಹಾಸಕಾರ ಕೆ.ಎಂ.ಪಣಿಕ್ಕರ್ ಅವರು ತಮ್ಮ MALABAR AND THE PORTUGUESE ಎಂಬ ಗ್ರಂಥದ (VOICE OF INDIA, NEW DELHI 1997 RePrint) PORTUGUESE RELIGIOUS POLICY IN MALABAR ಎಂಬ ಹನ್ನೆರಡನೆ ಅಧ್ಯಾಯದಲ್ಲಿ ಬರೆಯುತ್ತಾರೆ: ಸಿರಿಯನ್ ಚರ್ಚಿನ ಕ್ರೈಸ್ತರನ್ನು ಮಲಬಾರಿನ ಹಿಂದೂ ರಾಜರು ಅವರ ಧರ್ಮಾಚರಣೆಗಳಲ್ಲಿ ಸ್ವಲ್ಪವೂ ತಲೆ ಹಾಕದೆ ಉದಾರವಾಗಿ ನಡೆಸಿಕೊಳ್ಳುತ್ತಿದ್ದರು. ಹಾಗೆಂದು ಪೋರ್ಚುಗೀಸ್ ಪ್ರವಾಸಿಗಳೇ ದಾಖಲಿಸಿದ್ದಾರೆ. ಆದರೆ ಈ ಭಾರತೀಯ ಸಿರಿಯನ್ ಕ್ರೈಸ್ತರು ತಮಗೊದಗಿದ ಮೊದಲ ಅವಕಾಶದಲ್ಲೇ ಹಿಂದೂ ರಾಜರಿಗೆ ತಾವು ಇಟ್ಟಿದ್ದ ನಿಷ್ಠೆಯನ್ನು ತಿರಸ್ಕರಿಸಿ ಪೋರ್ಚುಗಲ್ ರಾಜನ ಅಧಿಕಾರವನ್ನು ಸ್ವೀಕರಿಸಿರುವುದಾಗಿ ಘೋಷಿಸಿಕೊಂಡರು.... ತಮ್ಮಲ್ಲಿದ್ದ ಪುರಾತನ ದಾಖಲೆಗಳು ಮತ್ತು ಧರ್ಮ ಚಿಹ್ನೆಗಳನ್ನು ವಾಸ್ಕೊಡಗಾಮನಿಗೆ ಸಮರ್ಪಿಸಿದರು. ಅಲ್ಲದೆ ಹಿಂದೂ ರಾಜ್ಯಗಳನ್ನು ವಶಪಡಿಸಿಕೊಳ್ಳುವಂತೆಯೂ. ಅದಕ್ಕೆ ತಾವು ಸಹಾಯ ಮಾಡುವುದಾಗಿಯೂ ಅವನಿಗೆ ಸೂಚಿಸಿದರು. ಈ ಉದ್ದೇಶಕ್ಕಾಗಿ ಗ್ರಾಂಗನೂರಿನಲ್ಲಿ ಒಂದು ಕೋಟೆ ಕಟ್ಟುವಂತೆ ಆಹ್ವಾನಿಸಿದರು. ಕ್ರೈಸ್ತರಿಗೆ ತಾವು ತೋರಿಸಿದ ಔದಾರ್ಯ ಮತ್ತು ದಯೆಗೆ ಹಿಂದೂ ರಾಜರುಗಳು ಪಡೆದ ಪ್ರತಿಫಲ ಇದು. ಕೊಚಿನ್‌ನ ಹಿಂದೂ ರಾಜನನ್ನೇ ಮತ ಪರಿವರ್ತನೆ ಮಾಡುವಂತೆ ಪೋರ್ಚುಗಲ್‌ನ ವೈಸರಾಯಿಗೆ ಆದೇಶ ಮಾಡಲಾಯಿತು.

ಟಿಪ್ಪಣಿ ಮಾಡುವ ಅಗತ್ಯವಿಲ್ಲ

ಚರ್ಚು ತನ್ನ ಮತ ವಿಸ್ತರಣೆಯ ವಿಧಾನದಲ್ಲಿ ಕ್ರೌರ್ಯವನ್ನು ಕಡಿಮೆ ಮಾಡಿಕೊಂಡದ್ದಕ್ಕೆ ಪ್ರಮುಖ ಕಾರಣವೆಂದರೆ ಯೂರೋಪಿನಲ್ಲಿ ನವೋದಯ ಉಂಟಾಗಿ ವಿಜ್ಞಾನ ತಂತ್ರಜ್ಞಾನಗಳ ಬೆಳವಣಿಗೆಯಾಗಿ ಯೂರೋಪಿನ ಹಲವು ರಾಜ್ಯಗಳು ಹೊಸ ಭೂಮಿಗಳನ್ನು ಆಕ್ರಮಿಸಿ ಸಾಮ್ರಾಜ್ಯ ಸ್ಥಾಪನೆ ಮಾಡತೊಡಗಿ ಧರ್ಮವೆಂದರೆ ಚರ್ಚಿನ ಧರ್ಮವೊಂದೇ ಅಲ್ಲ, ಪ್ರಪಂಚದಲ್ಲಿ ಬೇರೆ ಬೇರೆ ನಂಬಿಕೆಗಳಿವೆ ಎಂಬ ತಿಳಿವಳಿಕೆಯು ಮೇಲುವರ್ಗದವರಲ್ಲಿ ಉಂಟಾದದ್ದು . ಚರ್ಚಿನ ಅಧಿಕಾರಕ್ಕೆ ಸವಾಲು ಹಾಕಿದ ರಾಜ್ಯಶಕ್ತಿಗಳು ಪ್ರೊಟೆಸ್ಟೆಂಟ್ ಧರ್ಮವನ್ನು ಆರಂಭಿಸಿದವು. ಆಧುನಿಕ ಭೌತಶಾಸ್ತ್ರ, ಜೀವಶಾಸ್ತ್ರ ಮತ್ತು ಸಮಾಜಶಾಸ್ತ್ರಗಳ ಉದಯವಾಗಿ ಚರ್ಚಿನ ಕಂದಾಚಾರಗಳನ್ನು ಜನರು ತಿರಸ್ಕರಿಸತೊಡಗಿದರು. ತನ್ನ ಉಳಿವಿಗಾಗಿ ಚರ್ಚು ಈ ಹೊಸ ಚಿಂತನೆಗಳನ್ನು ತನ್ನ ಹಳೆಯ ನಂಬಿಕೆಗಳಿಂದ ಉದ್ಭವಿಸಿದ ವಿಚಾರಗಳೇ ಎಂಬಂತೆ ಬಿಂಬಿಸತೊಡಗಿತು. Christian Science ಎಂಬ ಹೊಸ ನಾಮಕರಣವನ್ನು ಮಾಡಿತು. ವಿಜ್ಞಾನವೇ ಬೇರೆ, Faith ಬೇರೆ. ವಿಜ್ಞಾನದ ವಿಧಾನಗಳಿಂದ Faith ಅನ್ನು ಅಳೆಯುವುದಾಗಲಿ, ತಿರಸ್ಕರಿಸುವುದಾಗಲಿ ಸಲ್ಲದು ಎಂಬ ವಾದವನ್ನು ಮುಂದೆ ಮಾಡಿತು.

ಸಮಸ್ತ ಭಾರತದಲ್ಲಿ ಸಾಮ್ರಾಜ್ಯವನ್ನು ಕಟ್ಟಿದ ಬ್ರಿಟಿಷರು ರೋಮಿನ ವ್ಯಾಟಿಕನ್‌ನಿಂದ ಸ್ವತಂತ್ರವಾದ Church of England ಅನ್ನು ಸ್ಥಾಪಿಸಿಕೊಂಡವರು. ಭಾರತದ ಧರ್ಮಗಳನ್ನು ನೇರವಾಗಿ ಕೆಣಕಿ ತಮ್ಮ ಸಾಮ್ರಾಜ್ಯವನ್ನು ಅಸ್ಥಿರಗೊಳಿಸಿಕೊಳ್ಳಲು ಅವರು ಸಿದ್ಧರಿರಲಿಲ್ಲ. ಆದ್ದರಿಂದ ತೋರಿಕೆಗಾದರೂ ಮಿಶನರಿಗಳಿಗಿಂತ ಸರ್ಕಾರವು ಭಿನ್ನವೆಂಬ ನಿಲುವನ್ನು ಅಳವಡಿಸಿಕೊಂಡರು. ಆದರೆ ಒಂದು ಹಂತದಲ್ಲಿ ಮಿಶನರಿಗಳಿಗೂ ಬ್ರಿಟಿಷರಿಗೂ ಒಂದೇ ಗುರಿ, ಒಂದೇ ಉದ್ದೇಶವಿತ್ತು. ಭಾರತೀಯರ ಭಾರತೀಯತೆಯನ್ನು ನಾಶಪಡಿಸಿದರೆ ತಮ್ಮ ಸಾಮ್ರಾಜ್ಯವನ್ನು ವಿರೋಧಿಸುವ ಅವರ ಶಕ್ತಿಯು ಉಡುಗುತ್ತದೆಂದು ಅವರು ಆಲೋಚಿಸಿ ನಿರ್ಧರಿಸಿದರು. ಮೆಕಾಲೆಯ ವಿದ್ಯಾಭ್ಯಾಸ ನೀತಿ, ಆರ್ಯರು ಹೊರಗಿನಿಂದ ಬಂದವರೆಂಬ ಸಿದ್ಧಾಂತ, ಭಾರತದ ಇತಿಹಾಸ ವ್ಯಾಖ್ಯಾನ, ವರ್ಣಾಶ್ರಮದ ವ್ಯಾಖ್ಯಾನ, ಸಮಾಜಶಾಸ್ತ್ರದ ವಿಶ್ಲೇಷಣೆ, ಸೆನ್ಸಸ್ ನೀತಿ, ಬೌದ್ಧರು, ಜೈನರು, ಸಿಖ್ಖರು, ಹಿಂದೂಗಳಲ್ಲವೆಂಬ ಸಿದ್ಧಾಂತ, ಆರ್ಯ ದ್ರಾವಿಡ ಸಿದ್ಧಾಂತ, ಮುಸ್ಲಿಮರ ಪ್ರತ್ಯೇಕತಾಭಾವದ ಪೋಷಣೆ ಮೊದಲಾದ ವಿಘಟನಾತ್ಮಕ ವ್ಯಾಖ್ಯಾನವನ್ನು ಸಿದ್ಧಪಡಿಸಿ ವಿಶ್ವವಿದ್ಯಾಲಯಗಳಲ್ಲಿ, ಪಠ್ಯಗಳಲ್ಲಿ ಪ್ರಚುರಪಡಿಸಿ ಭಾರತದ ಹೊಸ ತಳಿಗಳಲ್ಲಿ ಬಿತ್ತಿ ಬೆಳೆಸಿದರು. ಇವೆಲ್ಲವನ್ನೂ ಮಿಶನರಿಗಳು ಬಳಸಿಕೊಂಡದ್ದಲ್ಲದೆ, ಹಿಂದೂ ದೇವ ದೇವತೆಗಳನ್ನು ಅಪವ್ಯಾಖ್ಯಾನಿಸಿ ಇಡೀ ಹಿಂದೂ ಧರ್ಮವನ್ನು ಹೀಗಳೆಯುವ ಕೆಲಸವನ್ನು ಮಾಡುವ ಮೂಲಕ ಮತ ಪರಿವರ್ತನೆಯನ್ನು ಸುಲಭ ಮಾಡಿಕೊಂಡರು. ಅಷ್ಟರಲ್ಲಿ ಮಿಶನರಿಗಳು ಮತ ಪರಿವರ್ತನೆಯ ಅಸ್ತ್ರವಾಗಿ ಬೆಳೆಸಿಕೊಂಡಿದ್ದ ಶಾಲೆ, ಕಾಲೇಜುಗಳು ಮತ್ತು ಆಸ್ಪತ್ರೆಗಳಿಗೆ ಅವರು ಕೇಳಿದ ಕಡೆ, ಕೇಳಿದಷ್ಟು ಜಾಗಗಳನ್ನು ಕೊಡುತ್ತಾ, ದೇಶಿ ರಾಜರುಗಳಿಂದ ಕೊಡಿಸುತ್ತಾ, ಅಲೋಪತಿ ಚಿಕಿತ್ಸೆಯ ಮುಖ್ಯ ವಾಹಕರನ್ನಾಗಿ ಅವರನ್ನು ಬಿಂಬಿಸುತ್ತಾ ಪ್ರೋತ್ಸಾಹಿಸಿದರು. ಕ್ರೈಸ್ತರಾಗಿ ಮತ ಪರಿವರ್ತಿತರಾದವರಿಗೆ ನೌಕರಿ ಮತ್ತು ಬಡ್ತಿಗಳಲ್ಲೂ ಆದ್ಯತೆ ಕೊಡತೊಡಗಿದರು. ಪರಿವರ್ತಿತರಾದವರು ಬೇರೆಯವರಿಗಿಂತ ಕೆಂಪು ದೊರೆಗಳಿಗೆ ಹೆಚ್ಚು ನಿಷ್ಠರಾಗಿರುವಂತೆ ಚರ್ಚು ಮತ್ತು ಆಡಳಿತ ಎರಡೂ ನೋಡಿಕೊಂಡವು. ಅಚಾರ ವಿಚಾರ, ವೇಷ, ಊಟದ ರೀತಿ, ಜೀವನ ಶೈಲಿ ಮೊದಲಾದ ಎಲ್ಲ ವಿಧಗಳಲ್ಲೂ ಅವರು ಬ್ರಿಟಿಷರ ರೀತಿಯಲ್ಲೇ ಇರುವಂತೆ, ಬೆಳೆಯುವಂತೆ ಚರ್ಚು ಮಾಡಿತು. ಎಂಥೆಂಥ ವಿದ್ಯಾಸಂಸ್ಥೆಗಳನ್ನು, ಆಸ್ಪತ್ರೆಗಳನ್ನು ಅವರು ಕಟ್ಟಿದರು! ಎಂದು ನಮ್ಮ ಎಷ್ಟೋ ಜನರು ಮೆಚ್ಚುಗೆಯಿಂದ ಮೂಗಿನ ಮೇಲೆ ಬೆರಳಿಟ್ಟುಕೊಂಡದ್ದನ್ನು ನಾನೇ ನೋಡಿದ್ದೇನೆ (ಈಗ ನಮ್ಮವರೂ ಅವಕ್ಕಿಂತ ದೊಡ್ಡ ಸಂಸ್ಥೆಗಳನ್ನು ಕಟ್ಟಿದ್ದಾರೆ. ಕಟ್ಟುತ್ತಿದ್ದಾರೆ). ಆದರೆ ಒಂದು ಅಂಶವನ್ನು ಮಾತ್ರ ನಾವು ಮರೆಯಬಾರದು. ಅವರ ವೈದ್ಯಕೀಯ ಕಾಲೇಜುಗಳ ಬಹುಭಾಗ ಸೌಲಭ್ಯಗಳನ್ನು ಬಳಸುತ್ತಿದ್ದುದು, ಈಗಲೂ ಬಳಸುತ್ತಿರುವುದು ಕ್ರೈಸ್ತರಿಗೆ ವೈದ್ಯಕೀಯ ತರಬೇತಿ ಕೊಡುವುದಕ್ಕೆ, ವಿಶೇಷ ಪರಿಣತಿಗಳಲ್ಲಿ ಅವರನ್ನು ಮುಂದೆ ತರುವುದಕ್ಕೆ. ಈ ಸಂಸ್ಥೆಗಳನ್ನು ಕಟ್ಟಲು ಅವರಿಗೆ ದೊರೆತ ಸೌಲಭ್ಯಗಳನ್ನು ಹೋಲುವ ಒಂದು ಉದಾಹರಣೆಯನ್ನು ಇಲ್ಲಿ ಕೊಡಬಹುದು. ಎಂಥ ಗೊಂಡಾರಣ್ಯಗಳನ್ನು ಕಡಿದು ಕಾಫಿ ತೋಟಗಳನ್ನಾಗಿ ಪರಿವರ್ತಿಸಿದ ಇಂಗ್ಲಿಷ್ ರ ಸಾಹಸ ನಮ್ಮವರಿಗೆ ಎಲ್ಲಿಂದ ಬರಬೇಕು! ಎಂದು ಅವರನ್ನು ಹೊಗಳುತ್ತಿದ್ದ ಮಾತನ್ನು ಚಿಕ್ಕ ಹುಡುಗನಲ್ಲಿ ನಾನು ಕೇಳಿದ್ದೇನೆ. ಆನಂತರ ಒಬ್ಬ ನಿವೃತ್ತ ಹಿರಿಯ ಕಂದಾಯ ಅಧಿಕಾರಿಯು ನನಗೆ ವಿವರಿಸಿದರು: ಬೆಂಗಳೂರಿನಲ್ಲಿರುತ್ತಿದ್ದ ಬ್ರಿಟಿಷ್ ರೆಸಿಡೆಂಟರಿಂದ ಸಂಸ್ಥಾನದ ಸರಕಾರಕ್ಕೆ ಇಂತಿಂಥವರಿಗೆ ಕಾಫಿ ತೋಟಕ್ಕೆ ಜಮೀನು ಕೊಡಿ ಎಂದು ಸೂಚನೆ ಹೋಗುತ್ತಿತ್ತು. ಸೂಚನೆ ಎಂದರೆ ವಸ್ತುಶಃ ಹುಕುಂ. ಅದು ಜಿಲ್ಲಾಧಿಕಾರಿಯ ಮೂಲಕ ತಾಲೂಕಿನ ಅಮಲ್ದಾರರಿಗೆ ತಲುಪಿ ಅವರು ಒಬ್ಬ ರೆವಿನ್ಯೂ ಇನ್ಸ್‌ಪೆಕ್ಟರನ್ನು ಕಳಿಸುತ್ತಿದ್ದರು. ಈ ರೆವಿನ್ಯೂ ಇನ್ಸ್‌ಪೆಕ್ಟರೊಡನೆ ಕುದುರೆ ಏರಿದ ಬಿಳಿಯ ದೊರೆಯು (ಆಗ ಬಿಳಿಯರನ್ನೆಲ್ಲ ದೊರೆ ಎಂದೇ ಕರೆಯುತ್ತಿದ್ದುದು) ಒಂದು ಗುಡ್ಡದ ನೆತ್ತಿಯನ್ನೇರಿ ನಿಂತು ವೃತ್ತಾಕಾರದಲ್ಲಿ ಬೆರಳು ತೋರಿಸಿ ಇಷ್ಟು ಭೂಮಿ ಬೇಕು ಎನ್ನುತ್ತಿದ್ದ. ಈ ರೆವಿನ್ಯೂ ಅಧಿಕಾರಿ ವಿನಯದಿಂದ ತಲೆಬಾಗಿ ಆ ವಿಶಾಲ ವೃತ್ತಾಕಾರವನ್ನು ಅಳತೆ ಮಾಡಿಸಿ ಮೇಲಧಿಕಾರಿಗಳಿಗೆ ವರದಿ ಮಾಡುತ್ತಿದ್ದ. ಒಂದು ವಾರದಲ್ಲಿ ಸಾವಿರಾರು ಎಕರೆ ಕಾಡು ಆ ದೊರೆಗೆ ಮಂಜೂರಾಗುತ್ತಿತ್ತು. ಸ್ಥಳೀಯರನ್ನು ಕೂಲಿಗಳಾಗಿ ನೇಮಿಸಿಕೊಂಡು ದೊರೆಯು ಕಾಡಿನ ತೇಗ, ಬೀಟೆ, ಮತ್ತಿ ಮೊದಲಾದ ಹೆಮ್ಮರಗಳನ್ನು ಕಡಿಸಿ ಮಾರಿ ಹಣ ಮಾಡಿಕೊಂಡು ಅದೇ ಹಣವನ್ನು ಕಾಫಿ ತೋಟ ಮಾಡಲು ಬಳಸಿಕೊಳ್ಳುತ್ತಿದ್ದ. ಜತೆಗೆ ಬ್ರಿಟಿಷ್ ಮಾಲೀಕತ್ವದ ಇಂಪೀರಿಯಲ್ ಬ್ಯಾಂಕ್ ಅಂಥ ದೊರೆಗಳಿಗೆ ಕಾಫಿ ಬೆಳೆ ಬರುವವರೆಗೆ ಬಡ್ಡಿ ರಹಿತ, ಬೆಳೆ ಶುರುವಾದ ನಂತರ ಶೇಕಡಾ ಒಂದರಂತೆ ಬಡ್ಡಿ ಸಹಿತ ಸಾಲ ಕೊಡುತ್ತಿತ್ತು. ಒಬ್ಬೊಬ್ಬ ದೊರೆಯೂ ಸಾವಿರಾರು ಎಕರೆ ಕಾಫಿ ತೋಟದ ಒಡೆಯನಾಗಿ ಗುಡ್ಡದ ನೆತ್ತಿಯ ಮೇಲೆ ಇಂಗ್ಲಿಷ್ ಶೈಲಿಯ ಬಂಗಲೆ ಕಟ್ಟಿಸಿಕೊಳ್ಳುತ್ತಿದ್ದ. ಎಂಥ ಸಾಹಸ ! ಭಾರತೀಯ ಹೇಡಿಗಳಿಗೆ ಎಲ್ಲಿಂದ ಬರಬೇಕು, ಈ ಸಾಹಸ ! ಆಗ ಸಕಲೇಶಪುರದಲ್ಲಿದ್ದ ಪ್ಲಾಂಟರ್ಸ್ ಅಸೋಸಿಯೇಶನ್ ಕಟ್ಟಡದ ಬಾಗಿಲಿನಲ್ಲಿ “ಸ್ಥಳೀಯರಿಗೂ ನಾಯಿಗಳಿಗೂ ಪ್ರವೇಶ ಇಲ್ಲ” ಎಂಬ ಬೋರ್ಡ್ ಇತ್ತೆಂದು ಈಗಲೂ ಹೇಳುತ್ತಾರೆ.

ಮರಳುಗಾಡಿನಲ್ಲಿ ಜನ್ಮ ತಳೆದ ಈ ಮೂರು ಪ್ರವಾದಿ ಮತಗಳಿಗೂ ಭಾರತದಲ್ಲಿ ಹುಟ್ಟಿದ ಧರ್ಮಕ್ಕೂ ಒಂದು ಮೂಲಭೂತ ವ್ಯತ್ಯಾಸವಿದೆ. ಪ್ರತಿಯೊಬ್ಬ ಪ್ರವಾದಿಯೂ ನಾನು ಹೇಳುವುದೇ ಪರಮ ಸತ್ಯ. ; ನನ್ನ ಮೂಲಕವೇ ದೈವವಾಣಿಯು ಅಭಿವ್ಯಕ್ತವಾಗಿದೆ. ನೀವು ಅದಕ್ಕೆ ಎಂದರೆ ನನಗೆ, ಸಮರ್ಪಿಸಿಕೊಳ್ಳದಿದ್ದರೆ ನರಕವೇ ಗತಿ. ಅಷ್ಟು ಮಾತ್ರವಲ್ಲ. ಅದನ್ನು ಹಿಂಸೆಯನ್ನಾದರೂ ಪ್ರಯೋಗಿಸಿ ಪ್ರಪಂಚದಲ್ಲೆಲ್ಲ ವಿಸ್ತರಿಸುವುದು ನಿಮ್ಮ ಮತ ನಿಷ್ಠೆಯ ಮೂಲ ಗುಣ, ಆದ್ಯ ಕರ್ತವ್ಯ ಎಂದು ಬೋಧಿಸುತ್ತಾನೆ. ಪ್ರವಾದಿ ಮತವು ಮೂಲತಃ ಮತಾಂಧವಾದದ್ದು. ಭಾರತ ಧರ್ಮದ ಅತ್ಯಂತ ಪ್ರಾಚೀನ ಅಭಿವ್ಯಕ್ತಿಯಾದ ವೇದದ ಬಹುಮುಖ್ಯವಾದ ಬೋಧೆ, ಏಕಂ ಸತ್ ವಿಪ್ರಾಃ ಬಹುಧಾ ವದಂತಿ. ಸತ್ ಎಂಬುದು ಒಂದೇ. ತಿಳಿದವರು ಅದನ್ನು ಹಲವು ವಿಧಗಳಲ್ಲಿ ಹೇಳುತ್ತಾರೆ ಎಂಬ ಅತ್ಯಂತ ಮುಕ್ತ ಕಲ್ಪನೆಯು ಆನಂತರ ಕವಲೊಡೆದ ಎಲ್ಲ ವಾಹಿನಿಗಳಲ್ಲೂ ವ್ಯಕ್ತವಾಗಿದೆ. ಜೈನ ಜಿಜ್ಞಾಸೆಯಲ್ಲಿ ಸ್ಯಾದ್ವಾದ (ಸ್ಯಾತ್=ಬಹುದು, ಇರಬಹುದು, may be) ಎಂಬುದು ಬಹು ಮುಖ್ಯವಾದ ತತ್ತ್ವ. ಯಾವುದನ್ನೂ ಇದೇ ಪರಮಸತ್ಯವೆಂದು ಹಟ ಹಿಡಿಯಬಾರದು. ಯಾವ ವಿಚಾರವಾಗಲಿ, ನಾನು ಹೇಳುತ್ತಿರುವುದನ್ನೂ ಸೇರಿಸಿ, ಇರಬಹುದು. ಅದರ ವಿರುದ್ಧವಾದುದೂ ಇರಬಹುದು. ಇವೆರಡೂ ಏಕಕಾಲದಲ್ಲಿ ಇರಬಹುದು. ಹೀಗೆ ಅವರು ಏಕಕಾಲದಲ್ಲಿ ಏಳು ಬಗೆಯ ಸಾಧ್ಯತೆಗಳನ್ನು ಗುರುತಿಸುತ್ತಾರೆ. ಇದು ವೇದದ ಏಕಂ ಸತ್ ವಿಪ್ರಾಃ ಬಹುಧಾ ವದಂತಿ ಎಂಬ ದೃಷ್ಟಿಯ ಬೇರೊಂದು ಉಕ್ತಿ. ಭಾರತೀಯ ದರ್ಶನಗಳೆಲ್ಲವೂ ತರ್ಕವನ್ನು ಒಪ್ಪಿಕೊಂಡವು. ವಾದ ವಿವಾದಗಳನ್ನು ಮಾನ್ಯ ಮಾಡಿದವು. ಹೀಗಾಗಿ ಇಲ್ಲಿ ಪ್ರವಾದಿ ಮತದ ಮೂಲ ಬೇರಾದ ಮತಾಂಧತೆಗೆ ಅವಕಾಶವಾಗಲಿಲ್ಲ. ವೇದ ಮತ್ತು ಉಪನಿಷತ್ತುಗಳ ಋಷಿಗಳಾರೂ ಪ್ರವಾದಿಗಳಲ್ಲ. ಬೆಲ್ಜಿಯಂ ದೇಶದ ಕಾನ್ರಾಡ್ ಎಲ್ಸ್ಟ್ (KOENRAAD ELST) ಎಂಬ ತೌಲನಿಕ ಮತಧರ್ಮಗಳ ವಿದ್ವಾಂಸನು PSYCHOLOGY OF PROPHETISM ಎಂಬ ತನ್ನ ಗ್ರಂಥದ ಕೊನೆಯ ಅಧ್ಯಾಯದಲ್ಲಿ “ಪ್ರವಾದಿಗಳು ತಮ್ಮ ಬಗೆಗೇ ತುಂಬ ಹೇಳಿಕೊಳ್ಳುತ್ತಾರೆ. ತಾವು ವಿಶೇಷವಾದ ವ್ಯಕ್ತಿಗಳು, ತಮಗೂ ಸೃಷ್ಟಿಕರ್ತನಿಗೂ ಬೇರಾರಿಗೂ ಇಲ್ಲದ ವಿಶೇಷ ಸಂಬಂಧವುಂಟೆಂದು ಭಾವಿಸುತ್ತಾರೆ. ಋಷಿಗಳಾದರೋ ವಿಶ್ವಾತ್ಮಕ ಸತ್ಯವನ್ನು ಮಾತ್ರ ಹೇಳುತ್ತಾರೆ. ಸತ್ಯವು ಚೇತನದ ಒಂದು ವಿಶೇಷ ಸ್ಥಿತಿಯಲ್ಲಿ ಅರಿಯಬಹುದಾದದ್ದು. ಆ ಸ್ಥಿತಿಯನ್ನು ನಾವು ನೀವೆಲ್ಲ ಸಾಧನೆಯಿಂದ ಪಡೆಯಬಹುದು” ಎನ್ನುತ್ತಾರೆ. ಕಾನ್ರಾಡ್ ಎಲ್ಸ್ಟ್ ಅವರ ಈ ಪುಸ್ತಕವನ್ನು ಈ ವಿಷಯದಲ್ಲಿ ಗಂಭೀರ ಆಸಕ್ತಿ ಇರುವ ಪ್ರತಿಯೊಬ್ಬರೂ ಓದಬೇಕು. ಬೌದ್ಧ ಧರ್ಮವನ್ನು ಬೋಧಿಸಿದ ಬುದ್ಧನು ಪ್ರವಾದಿಯಲ್ಲ; ಋಷಿ. ಉಪನಿಷತ್ ಯುಗದ ಧರ್ಮ ಜಿಜ್ಞಾಸೆಗೆ ತೊಡಗಿದ ಮಹರ್ಷಿ. ಅವನ ಕಾಣ್ಕೆಯು ಉಪನಿಷತ್ತುಗಳಿಗೆ ವಿರೋಧವಾಗಿಲ್ಲ. ಈ ಬಗೆಗೆ R.D. RANADE ಯವರ A Constructive Survey of the Upanishadic Philosophy ಎಂಬ ಗ್ರಂಥದ ನಾಲ್ಕನೆ ಪ್ರಕರಣ, ಎರಡನೆ ವಿಭಾಗವನ್ನು ನೋಡಬೇಕು. ಈ ಪುಸ್ತಕದ ಕನ್ನಡಾನುವಾದವನ್ನು ಆರ್.ಆರ್. ದಿವಾಕರ, ದ.ರಾ.ಬೇಂದ್ರೆ ಮತ್ತು ಶಂಬಾ ಜೋಷಿಯವರು ಜೊತೆಗೂಡಿ ಮಾಡಿ ಮೂಲ ಇಂಗ್ಲಿಷ್ ಕೃತಿಯು ಪ್ರಕಟವಾದ ಎರಡು ವರ್ಷದೊಳಗೆ ಪ್ರಕಟಿಸಿದರು. ನನ್ನಲ್ಲಿರುವುದು ೨೦೦೪ರಲ್ಲಿ ಗುರುದೇವ ರಾನಡೆ ಸಮಾಧಿ ಟ್ರಸ್ಟ್, ನಿಂಬಾಳ, ವಿಜಾಪುರ ಜಿಲ್ಲೆ ಅವರು ಪ್ರಕಟಿಸಿರುವ ನಾಲ್ಕನೆಯ ಆವೃತ್ತಿಯ ಕನ್ನಡ ಪ್ರತಿ. ವೈದಿಕ ವಾಹಿನಿಯಾಗಲಿ, ಜೈನ, ಬೌದ್ಧ ವಾಹಿನಿಗಳಾಗಲಿ ಬಳಸುವುದು ಧರ್ಮ ಎಂಬ ಶಬ್ದವನ್ನೇ ಹೊರತು ಪ್ರವಾದಿ ಮತಗಳು ತಮ್ಮನ್ನು ತಾವು ಬಳಸಿಕೊಳ್ಳುವ religion ಎಂಬ ಶಬ್ದವನ್ನಲ್ಲ.

ಅಧ್ಯಾತ್ಮವನ್ನು ಹೀಗೆ ಅಳೆಯದಿರಿ

ಇತರ ಧರ್ಮ ಅಥವಾ ಮತಗಳ ಬಗೆಗೆ ಔದಾರ್ಯ ಮತ್ತು ಧರ್ಮಭಾವಗಳನ್ನು ಸೃಷ್ಟಿಸಿದ ಏಕಂ ಸತ್‌ವಿಪ್ರಾಃ ಬಹುಧಾ ವದಂತಿ ತತ್ತ್ವವು ಬೇಟೆಗಾರ ಮತಗಳು ಭಾರತವನ್ನು ದಾಳಿ ಮಾಡಿ ಆಕ್ರಮಿಸಿಕೊಳ್ಳತೊಡಗಿದಾಗ ನಮ್ಮ ಮತಾಚಾರ್ಯರುಗಳನ್ನು ಮೈ ಮರೆಸಿತು. ದಾಳಿ ಮಾಡಿ ಅಮಾನವೀಯವಾಗಿ ಲಕ್ಷ ಲಕ್ಷ ಜನರನ್ನು ಕೊಂದು ಹೆಂಗಸರು ಮಕ್ಕಳನ್ನು ಅತ್ಯಾಚಾರ ಮಾಡಿ ಗುಲಾಮರನ್ನಾಗಿ ಎಳೆದು ಕೊಳ್ಳುವವರು ಹೀನವರ್ತನೆಯವರೇ ವಿನಾ ಅವರ ಧರ್ಮದಲ್ಲಿ ಏನೂ ತಪ್ಪಿಲ್ಲ ಎಂಬ ಅಭ್ಯಾಸ ಬಲದ ಗ್ರಹಿಕೆಯ ಅಜ್ಞಾನದಲ್ಲೇ ಅವರು ಪ್ರವಚನ ಮಾಡುತ್ತಿದ್ದರು. ಶೃಂಗೇರಿ ಮಠದ ಎರಡು ತಲೆಮಾರು ಹಿಂದಿನ ಚಂದ್ರಶೇಖರ ಭಾರತಿ ಸ್ವಾಮಿಗಳಿಗೆ ಸಂಬಂಧಿಸಿದ ಒಂದು ಘಟನೆಯನ್ನು ಬಹುಜನರು ಹಿಂದೂ ಧರ್ಮದ ಉದಾರತೆಯ ಉದಾಹರಣೆಯಾಗಿ ಬರೆದಿದ್ದಾರೆ. ಯಾರೋ ಒಬ್ಬ ಯೂರೋಪಿಯನ್ನನು ಸ್ವಾಮಿಗಳನ್ನು ಸಂದರ್ಶಿಸಿ “ನನಗೆ ಹಿಂದೂವಾಗುವ ಬಯಕೆ ಇದೆ. ದೀಕ್ಷೆ ಕೊಡಿ” ಎಂದನಂತೆ. ಅದಕ್ಕೆ ಸ್ವಾಮಿಗಳು “ನೀನು ಒಳ್ಳೆಯ, ಕ್ರೈಸ್ತನಾಗು. ಆಗ ಹಿಂದೂವೂ ಆಗುತ್ತೀಯೆ” ಎಂದರಂತೆ. ಆದರೆ ಒಳ್ಳೆಯ ಕ್ರೈಸ್ತ ಎಂದರೆ ಸಾಧ್ಯವಾದಷ್ಟು ಜನರನ್ನು ಕ್ರೈಸ್ತ ಮತಕ್ಕೆ ಪರಿವರ್ತನೆ ಮಾಡುವವನೂ ಆಗಿರಬೇಕು ಎಂಬ ಒಳ ತತ್ತ್ವವು ಸ್ವಾಮಿಗಳಿಗೆ ತಿಳಿದಿತ್ತೇ? ಅಥವಾ ಏಕಂ ಸತ್ ವಿಪ್ರಾಃ ಎಂಬ ಮಂತ್ರದಲ್ಲಿ ಅವರು ಮುಳುಗಿ ಹೋಗಿದ್ದರೆ? ಅಥವಾ ಅನ್ಯಜಾತಿ ಅಥವಾ ಅನ್ಯ ಧರ್ಮೀಯನಿಗೆ ಉಪದೇಶ ಕೊಡದಿರುವ ಸಂಪ್ರದಾಯವನ್ನು ದಾಟುವುದು ಸ್ವಾಮಿಗಳಿಗೆ ಸಾಧ್ಯವಾಗಲಿಲ್ಲವೇ? ಎಂಬ ಪ್ರಶ್ನೆಗಳು ಉಳಿಯುತ್ತವೆ. ಮುಸಲ್ಮಾನರು ನಮ್ಮನ್ನು ಸದೆಬಡಿದು ಮತಾಂತರಿಸುತ್ತಿದ್ದಾಗ ಪೋರ್ಚುಗೀಸರು ಗೋವ, ಮಲಬಾರುಗಳಲ್ಲಿ INQUISITION ಮಾಡುತ್ತಿದ್ದಾಗ, ಬ್ರಿಟಿಷರ ಕಾಲದಲ್ಲಿ ಪಾದ್ರಿಗಳು ಸಮಾಜಸೇವೆಯ ಸೋಗಿನಲ್ಲಿ ಎಲ್ಲೆಲ್ಲೂ ಪರಿವರ್ತನೆ ಮಾಡುತ್ತಿದ್ದಾಗ ಈ ಬೇಟೆಗಾರ ಮತಗಳ ಗ್ರಂಥಗಳನ್ನು ಓದಿ ಅವುಗಳನ್ನು ಧಾರ್ಮಿಕ ಜಿಜ್ಞಾಸೆಗೆ ಒಳಪಡಿಸುವ ಕೆಲಸವನ್ನು ನಮ್ಮ ಧರ್ಮಾಚಾರ್ಯರುಗಳು ಮಾಡಲಿಲ್ಲ. ವಿಜಯನಗರ ಸಾಮ್ರಾಜ್ಯ ಸ್ಥಾಪನೆಗೆ ಆಧ್ಯಾತ್ಮಿಕ ಪ್ರೇರಕರೂ ಮಾರ್ಗದರ್ಶಕರೂ ಆಗಿದ್ದ ವಿದ್ಯಾರಣ್ಯರಿಗೆ ದೇಶದ ಸಾಂಸ್ಕೃತಿಕ ಮತ್ತು ರಾಜಕೀಯ ಸಮಸ್ಯೆ ಗೊತ್ತಿತ್ತು. ಆದರೆ ಅವರು ಆ ಬೇಟೆಗಾರ ಮತವನ್ನು ಓದಿ ವಿಶ್ಲೇಷಿಸಿ ಬರೆದಿರುವುದು ನನಗೆ ಗೊತ್ತಿಲ್ಲ. ಈ ಕೆಲಸವನ್ನು ನೇರವಾಗಿ ಕೈಗೆತ್ತಿಕೊಂಡು ಅಧ್ಯಾತ್ಮ ಮತ್ತು ಜಿಜ್ಞಾಸೆಯ ಮಟ್ಟದಲ್ಲಿ ಮಾಡಿದವರು ನನ್ನ ಓದಿನ ವ್ಯಾಪ್ತಿಯ ಮಿತಿಯಲ್ಲಿ ಹೇಳುವುದಾದರೆ ಮಹರ್ಷಿ ದಯಾನಂದ ಸರಸ್ವತಿಯವರು ಮತ್ತು ಸ್ವಾಮಿ ವಿವೇಕಾನಂದರು.

ಪೂರ್ವದ ಮತ್ತು ಬಹುತೇಕ ಇಂದಿನ ಹಿಂದೂ ಧರ್ಮಾಚಾರ್ಯರುಗಳಿಗಿರುವ ಬೇಟೆಗಾರ ಮತಗಳ ಬಗೆಗಿನ ಅವಜ್ಞೆಯು ಅಷ್ಟೇ ಬಹುತೇಕ ವಿದ್ಯಾವಂತ ಲೌಕಿಕರಿಗೂ ಇದೆ. ತಮ್ಮ ಜೀವನವನ್ನೇ ಬಲಿಯಾಗಿಟ್ಟು ಜಿಹಾದಿಗಳು ಉಗ್ರ ಚಟುವಟಿಕೆಗಳಲ್ಲಿ ತೊಡಗಿರುವಂತೆ ಹಳ್ಳಿ ಹಳ್ಳಿಗಳಲ್ಲಿ , ಗುಡ್ಡಗಾಡುಗಳಲ್ಲಿ ತಿರುಗಿ ಜನರನ್ನು ಮತಾಂತರಕ್ಕೆ ಪ್ರಚೋದಿಸುವ ಕಾಯಕದಲ್ಲಿ ತೊಡಗಿರುವ ಮಿಷನರಿಗಳ ಪ್ರೇರಕಶಕ್ತಿಯು ಅವರ ತಲೆಯಲ್ಲಿ ಕೂರಿಸಿರುವ ಈ ಬೋಧೆಯೇ.

ಸೇವೆಯ ಮಾನದಿಂದ ಧರ್ಮವನ್ನು ತೂಗುವುದು ಸಮಾಜದ ಆರ್ಥಿಕ ಬೆಳವಣಿಗೆ ಮತ್ತು ನ್ಯಾಯದ ದೃಷ್ಟಿಯಿಂದ ಸಹಜವೇ. ಪಶ್ಚಿಮ ದೇಶಗಳಲ್ಲಿ ಸುಖೀ ರಾಜ್ಯ ಅಥವಾ WELFARE STATEನ ಕಲ್ಪನೆ ಬೆಳೆದು-ವಿದ್ಯಾಭ್ಯಾಸ, ವೈದ್ಯಕೀಯ ಸೇವೆ, ಉದ್ಯೋಗ ಖಾತರಿ, ನಿರುದ್ಯೋಗ ಭತ್ಯೆ, ವೃದ್ಧ ರಕ್ಷಣೆ ಮೊದಲಾದ ಕಾರ್ಯಗಳು ಸರಕಾರದ ಜವಾಬ್ದಾರಿಗೆ ಒಳಪಟ್ಟು ಸರಕಾರವು ಅವುಗಳನ್ನು ಸಮರ್ಪಕವಾಗಿ ನಿರ್ವಹಿಸತೊಡಗಿದಾಗ ಮತಕ್ಕೂ ಸೇವೆಗೂ ಸಂಬಂಧವಿಲ್ಲ ಎಂಬ ಭಾವನೆ ಬೆಳೆಯಿತು. ಕೆಲವು ದಶಕಗಳ ಹಿಂದೆ ನಮ್ಮವರೇ ಕೆಲವರು “ಕ್ರೈಸ್ತ ಮತವನ್ನು ನೋಡು, ಶಾಲೆ, ಕಾಲೇಜು, ಆಸ್ಪತ್ರೆ, ಅನಾಥಾಶ್ರಮ, ಶುಶ್ರೂಷೆ ಹೀಗೆ ಎಷ್ಟೊಂದು ಸೇವಾ ಕಾರ್ಯ ಮಾಡುತ್ತಾರೆ. ನಮ್ಮ ಧರ್ಮದಲ್ಲಿ ಏನಿದೆ?” ಎನ್ನುತ್ತಿದ್ದರು. ಈಗ ನಮ್ಮ ಎಷ್ಟೋ ಮಠಗಳು ಇಂಥ ಹಲವಾರು ನೂರಾರು ಸಂಸ್ಥೆಗಳನ್ನು ನಡೆಸುತ್ತಿವೆ. ಆದರೆ ಸೈದ್ಧಾಂತಿಕವಾಗಿ ನೋಡಿದರೆ ಇವು ನಿಜವಾಗಿಯೂ ಮಠದ ಕೆಲಸಗಳೆ? ಭ್ರಷ್ಟ ರಾಜಕಾರಣಿಗಳು, ಭ್ರಷ್ಟ ಸರಕಾರವು ತಮ್ಮ ಕರ್ತವ್ಯಗಳಲ್ಲಿ ಸೋತಿರುವಾಗ ಮಠಗಳಾದರೂ ಈ ಕೆಲಸ ಮಾಡುತ್ತಿರುವುದು ವಂದನೀಯ. ಆದರೆ ಅವು ಎಷ್ಟರ ಮಟ್ಟಿಗೆ ಅಧ್ಯಾತ್ಮದ ಬುಗ್ಗೆಗಳಾಗಿವೆ? ಅಧ್ಯಾತ್ಮದ ಪ್ರಸಾರ ಕೇಂದ್ರಗಳಾಗಿವೆ? ಅನ್ನ , ಬಟ್ಟೆ ಆಸ್ಪತ್ರೆ, ಉದ್ಯೋಗ , ವಿದ್ಯಾಭ್ಯಾಸ, ವಿಜ್ಞಾನದ ಅಧ್ಯಯನಾವಕಾಶಗಳೆಲ್ಲ ದಕ್ಕಿಯೂ ಮನುಷ್ಯನ ಜೀವವು ಅನುಭವಿಸುವ ಅರಕೆ, ಅದನ್ನು ತುಂಬುವ ತುಡಿತವನ್ನು ಪೂರೈಸಲು ನಮ್ಮ ಮಠಗಳು ಸಮರ್ಥವಾಗಿವೆಯೇ? ಅಧ್ಯಾತ್ಮವು ನಮ್ಮ ನೈತಿಕ ಪ್ರಜ್ಞೆಯನ್ನು ಉದ್ದೀಪಿಸುವ ಬೆಳಕು ಎಂಬುದು ನಿಜವಾದರೂ ಲೌಕಿಕ ಚಟುವಟಿಕೆಗಳಿಂದ ಅಧ್ಯಾತ್ಮವನ್ನು ಅಳೆಯಬಾರದು.

೧೯೭೫ರಲ್ಲಿ ನಾನು UNESCO ಸಂಸ್ಥೆಯು ಟೋಕಿಯೋ ನಗರದಲ್ಲಿ ಒಂದು ತಿಂಗಳು ಏರ್ಪಡಿಸಿದ್ದ ನೀತಿ ಶಿಕ್ಷಣ ಕುರಿತ ಸಂಕಿರಣಕ್ಕೆ ಭಾರತದ ಪ್ರತಿನಿಧಿಯಾಗಿ ಹೋಗಿದ್ದೆ. ಸಂಕಿರಣಕ್ಕೆ ಪೂರಕವಾಗಿ ಜಪಾನಿನ ಕೆಲವು ಶಾಲೆಗಳನ್ನು ಅಲ್ಲಿ ನೀತಿ ಶಿಕ್ಷಣವನ್ನು ಹೇಗೆ ನೀಡುತ್ತಾರೆಂಬ ದೃಷ್ಟಿಯಿಂದ ಸಂದರ್ಶಿಸುವ ಕಾರ್ಯಕ್ರಮವಿತ್ತು. ಅವುಗಳಲ್ಲಿ ಒಂದು ಕ್ರೈಸ್ತ ಮಿಶನರಿ ಶಾಲೆ. ವಿವರಗಳನ್ನೆಲ್ಲ ತಿಳಿದ ಮೇಲೆ ನಾನು ಅದರ ಪ್ರಿನ್ಸಿಪಾಲರನ್ನು ಕೇಳಿದೆ;

“ಈ ದೇಶದ ಇತರ ಶಾಲೆಗಳಿಗಿಂತ ನಿಮ್ಮ ಶಾಲೆಯು ಈ ವಿಷಯದಲ್ಲಿ ಭಿನ್ನವಾಗಿದೆಯೇ? ವಿಶಿಷ್ಟವಾಗಿದೆಯೇ?”
“ವೆರಿಗುಡ್ ಕ್ವೆಶ್ಚನ್. ನಮ್ಮದು ವಿಶಿಷ್ಟ.” ಜಪಾನೀ, ಆದರೆ ಕ್ರೈಸ್ತ ಮತೀಯನಾದ ಆತ ಉತ್ತರಿಸಿದ.
“ಹೇಗೆ?”
“ನಮ್ಮ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳಲ್ಲಿ ಸುಮಾರು ಮೂವತ್ತು ಜನರು ಬೆಳೆದು ವಯಸ್ಕರಾದ ನಂತರ ಕ್ರೈಸ್ತ ಮತಕ್ಕೆ ಬದಲಾಯಿಸಿಕೊಂಡಿದ್ದಾರೆ".

ಧೈರ್ಯವೆಲ್ಲಿದೆ?

ಅವರಿಗೆ ನೀತಿ ಎಂದರೆ ಜಾತಿ ಬದಲಾಯಿಸಿಕೊಳ್ಳುವುದು. ಕ್ರೈಸ್ತನಲ್ಲದವನು ನೀತಿವಂತನಾಗಲಾರ. ಮಹಾತ್ಮ ಗಾಂಧಿಯ ವಿಷಯದಲ್ಲಿ ಒಬ್ಬ ಮುಸ್ಲಿಂ ನಾಯಕನು ಹೇಳಿದ ಮಾತು ಪ್ರಸಿದ್ಧವಾಗಿದೆ. “ಅವನು ಮಹಾತ್ಮನಿರಬಹುದು. ಆದರೆ ಒಬ್ಬ ಲಫಂಗನಾದ ಮುಸ್ಲಿಮನಿಗಿಂತ ಅವನು ಕೀಳೇ. ಏಕೆಂದರೆ ಅವನು ಮುಸ್ಲಿಮನಲ್ಲ.” ಈ ಮನಃಸ್ಥಿತಿಯವರಿಗೆ ನೀತಿಯು ಮತವನ್ನು ಅವಲಂಬಿಸಬೇಕಿಲ್ಲ ಎಂಬ ದೃಷ್ಟಿಯಾಗಲಿ, ಮತ ವಿಸ್ತರಣೆಗೆ ಹಿಂಸೆ, ಕ್ರೌರ್ಯ, ಬಲ, ಹಣ, ಆಮಿಷ ಪ್ರಚಾರಗಳನ್ನು ಬಳಸಬಾರದೆಂಬ ಸೂಕ್ಷ್ಮವಾಗಲಿ ಇರುವುದು ಸಾಧ್ಯವಿಲ್ಲ.

ಎಲ್ಲೆಲ್ಲಿಯೂ, ಎಲ್ಲಾ ಮಾಧ್ಯಮಗಳಲ್ಲಿ, ರಾಜಕೀಯ ಶಕ್ತಿ ಸ್ಥಾನಗಳಲ್ಲಿ, ಅಂತಾರಾಷ್ಟ್ರೀಯ ವಲಯಗಳಲ್ಲಿ ಭಾರಿ ಪ್ರಚಾರವನ್ನು ಗಿಟ್ಟಿಸಿಕೊಂಡು ಈಗ ವ್ಯಾಟಿಕನ್‌ನಿಂದ ಸೇಂಟ್ ಎಂಬ ಬಿರುದನ್ನು ಪಡೆಯುವ ಹಂತದಲ್ಲಿರುವ ಮದರ್ ಥೇರೇಸಾರ ಬಗೆಗೆ ಒಂದು ಪ್ರಶ್ನೆ : ಅನಾಥ ಮಕ್ಕಳನ್ನು ತಮ್ಮ ಆಶ್ರಮಕ್ಕೆ ಸೇರಿಸಿಕೊಂಡು ಪೋಷಿಸಿದ ಆಕೆಯು ಈ ಮಕ್ಕಳನ್ನು ಅವರವರ ಮೂಲ ಧರ್ಮವನ್ನರಿಯಲು, ಅನುಸರಿಸಲು ಬಿಟ್ಟರೆ? ಆಕೆ ತೀರಿದ ಮೇಲೆ ನಾನು ಕಲ್ಕತ್ತೆಯಲ್ಲಿ ಆ ಆಶ್ರಮಕ್ಕೆ (MISSIONERIES OF CHARITY) ಹೋಗಿ ವಿಚಾರಿಸಿದೆ. ಆ ಮಕ್ಕಳನ್ನೆಲ್ಲ ಕ್ರೈಸ್ತರನ್ನು ಮಾಡಿಯೇ ಇದ್ದಾರೆ. ಇದೊಂದು ಮತ ವಿಸ್ತರಣೆಯ ಹುನ್ನಾರವಲ್ಲವೆ? ಇಂಥವರಿಗೆ ವ್ಯಾಟಿಕನ್ ಸಹಾಯದಿಂದ ಹಣ ಮತ್ತು ಪ್ರಚಾರಗಳು ದೊರೆತು, ಪಾಶ್ಚಿಮಾತ್ಯ ಮಾಧ್ಯಮಗಳ ಪ್ರತಿಧ್ವನಿಯಾದ ನಮ್ಮ ಮಾಧ್ಯಮಗಳೂ ಆ ಪ್ರಚಾರವನ್ನೇ ಪ್ರತಿಧ್ವನಿಸಿ ಆಕೆಯನ್ನು ಮುಗಿಲೆತ್ತರಕ್ಕೆ ಏರಿಸಲಿಲ್ಲವೆ? ಸೇಂಟ್ ಎನ್ನಿಸಿಕೊಳ್ಳುವ ವ್ಯಕ್ತಿಯು ತನ್ನ ಜೀವನದಲ್ಲಿ ಕೆಲವಾದರೂ ಪವಾಡಗಳನ್ನು ಮಾಡಿರಬೇಕೆಂಬ ಕ್ರೈಸ್ತ ನಿಯಮವನ್ನು ಪೂರೈಸಲು ಕಲ್ಕತ್ತಾ ಆಶ್ರಮದ ಕೆಲವು ಸನ್ಯಾಸಿನಿಯರು ಆಕೆ ಕೆಲವು ಪವಾಡಗಳನ್ನು ಮಾಡಿದ್ದನ್ನು ತಾವು ಕಣ್ಣಾರೆ ಕಂಡೆವೆಂದು ಹೇಳಿಕೆ ನೀಡಿದಾಗ, ಸಾಯಿಬಾಬಾ ಮಾಡುತ್ತಿದ್ದರೆಂಬ ಪವಾಡಗಳಿಗೆ ಸಾರ್ವಜನಿಕ ಸವಾಲು ಎಸೆದ ನಮ್ಮ ಬುದ್ಧಿಜೀವಿಗಳು ನಿಶ್ಶಬ್ದವಾಗಿರಲಿಲ್ಲವೆ?

ಈಗ ಅರವತ್ತು ವರ್ಷಗಳ ಹಿಂದೆ ನಾನು ನನ್ನ ಹಳ್ಳಿ ಮತ್ತು ಸುತ್ತಣ ಹಳ್ಳಿಗಳಲ್ಲಿ ಕಣ್ಣಾರೆ ನೋಡುತ್ತಿದ್ದ ಸಂಗತಿ: ಒಂದು ಬಸವನ ಮೇಲೆ ಕಟ್ಟಿದ ನಗಾರಿಯ ಸದ್ದು. ಅದನ್ನು ಕೇಳುತ್ತಿದ್ದ ಗ್ರಾಮಸ್ಥರು “ಸಿದ್ಧಗಂಗೆ ಸ್ವಾಮಿಗಳು ಭಿಕ್ಷಕ್ಕೆ ಬಂದವರೆ” ಎಂದು ಮನೆಯಿಂದ ಹೊರಗೆ ಬರುತ್ತಿದ್ದರು. ಈಗ ಶತಾಯುಷಿಯಾಗಿರುವ ಶಿವಕುಮಾರಸ್ವಾಮಿಗಳಿಗೆ ಆಗ ನಲವತ್ತರ ಪ್ರಾಯ. ಎತ್ತಿನ ಗಾಡಿಯಲ್ಲಿ ಕುಳಿತು ಬರುತ್ತಿದ್ದರು. ಹಳ್ಳಿಯವರು ತಾವೇ ಮನೆಮನೆಗಳಿಂದ ರಾಗಿ, ಕಾಳು, ಮೆಣಸಿನಕಾಯಿಗಳನ್ನು ಎತ್ತಿ ಮೂಟೆ ಕಟ್ಟಿ ತಮ್ಮದೇ ಗಾಡಿಗೆ ತುಂಬಿ ತಮ್ಮ ಎತ್ತುಗಳನ್ನು ಕಟ್ಟಿ, ಆಳಿನೊಡನೆ ನಲವತ್ತು ಮೈಲಿ ದೂರದ ಸಿದ್ಧಗಂಗೆಗೆ ಕಳಿಸುತ್ತಿದ್ದರು. ಹಳ್ಳಿ ಹಳ್ಳಿಗಳಿಂದ ಹೀಗೆ ದಿನಸಿ ಹೋಗುತ್ತಿತ್ತು. ಸ್ವಾಮಿಗಳು ದಿನಸಿಯನ್ನು ಕೇಳುತ್ತಿರಲಿಲ್ಲ. ಗ್ರಾಮಸ್ಥರು ತಾವಾಗಿಯೇ ಕೊಡುತ್ತಿದ್ದರು. ಸ್ವಾಮಿಗಳು ಕೇಳುತ್ತಿದ್ದದ್ದು “ನಿಮ್ಮೂರಿನಲ್ಲಿ ಬಡ ಮಕ್ಕಳು ಎಷ್ಟು ಜನವಿದ್ದರೂ ನನ್ನ ಜೊತೆ ಕಳಿಸಿ, ನಾವು ಊಟ ಹಾಕಿ, ಬಟ್ಟೆ ಸ್ಲೇಟು ಪುಸ್ತಕ ಕೊಟ್ಟು ಓದಿಸುತೀವಿ. ವಿದ್ಯಾಭ್ಯಾಸ ಮುಖ್ಯ”. ಆಗ ಸಿದ್ಧ ಗಂಗೆಯಲ್ಲಿ ಇಷ್ಟು ಮಕ್ಕಳಿರಲಿಲ್ಲ. ಕ್ರಮೇಣ ಸಂಖ್ಯೆಯು ವರ್ಧಿಸಿ ಈಗ ಏಳೆಂಟು ಸಾವಿರವಾಗಿದೆ. ಸ್ವಾಮಿಗಳು ಸನ್ಯಾಸಿ ಧರ್ಮವಾದ ಭಿಕ್ಷಾಟನೆಯಿಂದ ದಿನಕ್ಕೆ ಮೂರು ನಾಲ್ಕು ಹಳ್ಳಿಗಳನ್ನು ಸುತ್ತಿ, ದಾಸೋಹದ ಪ್ರಮಾಣವನ್ನು ಬೆಳೆಸಿದರು. ಎಲ್ಲ ಜಾತಿ ಎಲ್ಲ ಪಂಗಡಗಳ ಮಕ್ಕಳನ್ನೂ ಬೆಳೆಸಿದರು. ಮುಸಲ್ಮಾನ ಹುಡುಗರನ್ನೂ ನಾನು ಅಲ್ಲಿ ನೋಡಿದ್ದೇನೆ. ಯಾರಿಗೂ ಲಿಂಗಧಾರಣೆ ಮಾಡಿಲ್ಲ. ಅವರವರ ಜಾತಿ ಆಚರಣೆಗಳು ಅವರವರದ್ದು. ಉತ್ತಮ ನಡತೆ ಕಲಿಸುವುದಷ್ಟೇ ನಮ್ಮ ಕರ್ತವ್ಯ ಎಂಬ ನಿಯಮವಿಟ್ಟುಕೊಂಡು ನಡೆಸುತ್ತಿದ್ದಾರೆ. ಅವರಿಗೆ ಮೊನ್ನೆ ಮೊನ್ನೆ ನೂರು ವರ್ಷವಾದಾಗ ಪತ್ರಿಕೆಗಳು ಗಮನಹರಿಸಿದವು; ಅವೂ ಕನ್ನಡ ಪತ್ರಿಕೆಗಳು. ಅವರಿಗೆ ಮದರ್ ಥೆರೇಸಾರಿಗೆ ದಕ್ಕಿದ ಪ್ರಚಾರ ಸಿಗಲಿಲ್ಲ. ಸಿಗುತ್ತಿಲ್ಲವೆಂದು ನಾವು ಖೇದಪಡಬೇಕಿಲ್ಲ. ಯಾವ ಒಳ್ಳೆಯ ಕೆಲಸ ಮಾಡಿದರೂ ಅದನ್ನು ಈಶ್ವರ ಪ್ರಣಿಧಾನ ಭಾವನೆಯಿಂದ ಸಾಧಿಸುವುದು ಯೋಗಿಯ ಪಂಚನಿಯಮಗಳಲ್ಲಿ ಒಂದು. ನಾನು ಮಾಡಿದೆ ಎಂಬ ಭಾವನೆಗೆ ಒಳಗಾಗುವುದು ಅಹಂಕಾರವನ್ನು ಉಬ್ಬಿಸಿಕೊಂಡಂತೆ. ಅವನು ಯೋಗ ಸಾಧನೆಯ ಮುಂದಿನ ಮೆಟ್ಟಿಲನ್ನು ಹತ್ತಲಾರ. ಮಲ್ಲಾಡಿಹಳ್ಳಿಯ ರಾಘವೇಂದ್ರ ಸ್ವಾಮಿಗಳು, ಬಾಬಾ ಆಮ್ಟೆ, ಬಿಳಿಗಿರಿರಂಗನಬೆಟ್ಟದ ಡಾ.ಸುದರ್ಶನ ಮೊದಲಾಗಿ ಆಧುನಿಕ ಭಾರತದ ಹಲವರು ಜನಸೇವೆಯ ನಿಷ್ಕಾಮ ಕರ್ಮದಲ್ಲಿ ತೊಡಗಿದ್ದಾರೆ. ಮದರ್ ಥೆರೇಸಾರಿಗಿಂತ ಹೆಚ್ಚಿನ ಸೇವೆ ಮಾಡಿದ್ದಾರೆ. ಅವರು ಯಾರಿಗೂ ಆಕೆಗೆ ಸಂದ ವೈಭವ ದೊರೆಯಲಿಲ್ಲ. ಏಕೆಂದರೆ ಅವರದು ಏಸುವಿನ ಮಹಿಮೆಯನ್ನು ಪ್ರಚಾರ ಮಾಡುವ ಸೇವೆಯಲ್ಲ.

ಅನುಷ್ಠಾನಗೊಳಿಸುವವರಾರು?

ಹಲವರನ್ನಾದರೂ ಕ್ರೈಸ್ತ ಮತಕ್ಕೆ ತಂದರೆ ಮಾತ್ರ ನೀನು ನಿಜವಾದ ಕ್ರೈಸ್ತ ಎಂಬ ಬೋಧನೆಯನ್ನು ತಲೆಗೆ ತುಂಬಿಕೊಂಡ ಸಾವಿರಾರು ಜನರು ಕೇರಿಕೇರಿಗಳಲ್ಲಿ, ಹಳ್ಳಿ ಹಳ್ಳಿಗಳಲ್ಲಿ, ಕಾಡುಗುಡ್ಡಗಳಲ್ಲಿ ಮತ ಪರಿವರ್ತನೆಯ ಕೆಲಸದಲ್ಲಿ ತೊಡಗಿದ್ದಾರೆ. ಅವರಿಗೆ ಬೇಕಾದ ಕಡೆ ತರಬೇತಿ, ಹಣ, ಮಾರ್ಗದರ್ಶನ, ಎಲ್ಲಾದರೂ ಎಡವಟ್ಟಾದರೆ ಸಾರ್ವಜನಿಕ ಹಾಗೂ ರಾಜಕೀಯ ಅಬ್ಬರವನ್ನು ಒದಗಿಸುವ ಮಹಾದಂಡ ನಾಯಕತ್ವವು ವಿದೇಶೀ ಮೂಲದ ಮಿಶನರಿಗಳದು. ಹಿಂದೂಗಳಿಗಾದರೋ ಕಳೆದು ಗೊತ್ತೇ ಹೊರತು ಗಳಿಸಿ ಗೊತ್ತಿಲ್ಲ. ಮತ ಪರಿವರ್ತನೆಗೆ ಸಂಬಂಧಿಸಿ ಒಂದು ಕಾನೂನೇನೋ ಇದೆ. ಅದನ್ನು ನ್ಯಾಯಾಲಯವು ಕೂಡ ವಿವರಿಸಿದೆ. ಆದರೆ ಈ ವಿವರಣೆಯನ್ನು ಅನುಷ್ಠಾನಗೊಳಿಸುವವರಾರು? ಯಾರಾದರೂ ಹಿಂದೂಗಳು ಪರಿವರ್ತನೆಯಲ್ಲಿ ತೊಡಗಿರುವವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲು ಯತ್ನಿಸಿದರೆ ನಮ್ಮ ಮಾಧ್ಯಮಗಳ ಚಿತ್ರಣಗಳಲ್ಲಿ ಅವರೇ ಧರ್ಮಾಂಧರಾಗುತ್ತಾರೆ. ಪೊಲೀಸರು ಕ್ರಮ ಕೈಗೊಳ್ಳುವುದಿಲ್ಲ. ಯಾವ ಪಾತಕಿಗೂ ಶಿಕ್ಷೆಯಾಗುವುದಿಲ್ಲ. ತಡೆಯ ಹೊರಟವರನ್ನು ನೂರಾರು ಹೆಸರಿನ ಕ್ರೈಸ್ತ ಸಂಘಗಳಲ್ಲದೆ ನಮ್ಮ ರಾಜಕೀಯ ಪಕ್ಷಗಳು, ವಿವಿಧ ಬಣ್ಣಗಳ ಸಾಮಾಜಿಕ ಪಕ್ಷಗಳು, ವಿವಿಧ ಬಣ್ಣಗಳ ಬುದ್ಧಿಜೀವಿಗಳು ಮುಗಿಲು ಮುಟ್ಟುವಂತೆ ಖಂಡಿಸುತ್ತಾರೆ. ಸರ್ಕಾರವಂತೂ ಅವರನ್ನು ಅರೆಸ್ಟ್ ಮಾಡಿಸುತ್ತದೆ. ಅಶಾಂತಿಯ ಉತ್ಪಾದಕರು ಎಂಬ ಆಪಾದನೆ ಹೊರಿಸುತ್ತದೆ.


ಕಾಂಗ್ರೆಸ್ಸಿಗೆ ನೆಹರೂ ಕಾಲದಿಂದಲೂ ಹಿಂದೂಗಳನ್ನು ಬಲಿಕೊಟ್ಟು ಅದನ್ನು ಸಮರ್ಥಿಸುವ ಪರಿಪಾಠವಿದೆ. ಕಾಂಗ್ರೆಸ್ ಮೇಲೆ ಮಹಾತ್ಮಗಾಂಧಿಯ ಹಿಡಿತವು ಸ್ವಾತಂತ್ರ್ಯ ಪ್ರಾಪ್ತಿಯ ಮೊದಲೇ ಸಡಿಲವಾಗಿತ್ತು. ನೆಹರೂರ ರೀತಿ ನೀತಿಗಳು ಎಂದೂ ಗಾಂಧಿ ತತ್ತ್ವಕ್ಕೆ ವಿರೋಧವಾಗಿಯೇ ಇದ್ದವು. ಈಗಂತೂ ಈ ಪಕ್ಷವನ್ನು ವ್ಯಾಟಿಕನ್ ದೇಶದ ಕ್ರೈಸ್ತ ಮಹಿಳೆಯು ನಿಯಂತ್ರಿಸುತ್ತಿದ್ದಾಳೆ. ಪ್ರತಿಯೊಬ್ಬ ಕಾಂಗ್ರೆಸಿಗನೂ ಆಕೆಗೆ ಡೊಗ್ಗು ಸಲಾಮು ಹಾಕದೆ ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಿಕೊಳ್ಳಲು ಅಸಾಧ್ಯವಾಗಿರುವಾಗ, ಪ್ರತಿಯೊಬ್ಬ ಕಾಂಗ್ರೆಸಿಗನಿಗೂ ಅಧಿಕಾರದಲ್ಲುಳಿದು, ಹಣ ಮಾಡುವುದೇ ಗುರಿಯಾಗಿರುವಾಗ ಆಕೆಯನ್ನು, ಆಕೆಯ ಮತ ವಿಸ್ತರಣೆಯನ್ನು ವಿರೋಧಿಸಿ ಒಂದೇ ಒಂದು ಮಾತನಾಡುವ, ವಿರೋಧಿಸುವವರನ್ನು ನಾಮುಂದು ತಾಮುಂದು ಎಂದು ಬೈಯದೆ ಸುಮ್ಮನಿರುವ ಧೈರ್ಯ ಎಲ್ಲಿಂದ ಬರಬೇಕು? ಕಾಂಗ್ರೆಸಿನಲ್ಲಿಲ್ಲದ ದೇವೇಗೌಡರು, ಮುಲಾಯಂ ಸಿಂಗ್, ಲಾಲೂ ಪ್ರಸಾದ್ ಯಾದವ್ ಮೊದಲಾದವರಿಗೆ ಅಲ್ಪಸಂಖ್ಯಾತರ ಓಟಿನ ಮೇಲೆ ಕಣ್ಣು. ಹಿಂದೂ ಪರವೆಂದು ಬಿಂಬಿಸಿಕೊಂಡಿರುವ ಬಿಜೆಪಿ ಮೇಲೆ ದ್ವೇಷ.


ಹಿಂದೂ ದ್ವೇಷವು ಭಾರತದ ಕಮ್ಯೂನಿಸ್ಟರ ಬದ್ಧ ತತ್ತ್ವಗಳಲ್ಲೊಂದು. ಬುದ್ಧಿಜೀವಿಗಳ ಬುದ್ಧಿಯು ರೂಪಿತವಾಗಿರುವುದೇ ಮೆಕಾಲೆಯು ಗುರಿ ಇಟ್ಟ ವಿಚಾರಗಳಿಂದ. ದಿನಕ್ಕೆ ಒಂದು ವೇದ ಮಂತ್ರಗಳಿಂದ ಪೂಜೆ ನಡೆಯುವ ದೇವಾಲಯ, ಒಂದು ಕುರಿ ಹೋತಗಳ ಬಲಿಯನ್ನು ಕದ್ದು ಮಾಡುವ ದೇವಾಲಯಗಳಿಗೆ ಹೋಗಿ ಪೂಜೆ ಮಾಡಿಸಿ, ಇಪ್ಪತ್ತೊಂದು, ಐವತ್ತೊಂದು ಅಥವಾ ನೂರಾಒಂದು ಋತ್ವಿಜ ರಿಂದ ಹತ್ತಾರು ಲಕ್ಷ ರೂಪಾಯಿಗಳ ಖರ್ಚಿನಿಂದ ಹೋಮ ಮಾಡಿಸಿ ಅದರ ಭಸ್ಮವನ್ನು ಹಣೆಗೆ ಹಚ್ಚಿ ಸಂಜೆ ಮಸೀದಿಗೆ ಹೋಗಿ ಮುಂದಿನ ಜನ್ಮದಲ್ಲಿ ಮುಸಲ್ಮಾನ ಜನ್ಮವನ್ನು ಕೊಡುವಂತೆ ತಾನು ದೇವರನ್ನು ಸದಾ ಪ್ರಾರ್ಥಿಸು ತ್ತಿರುವುದಾಗಿ ಭಾಷಣ ಮಾಡುವ ರಾಜಕಾರಣಿಗಳೇ ನಮ್ಮಲ್ಲಿ ಹೆಚ್ಚು. ಹಾಗೆ ಮಾಡದಿದ್ದರೆ ಪ್ರಜಾಪ್ರಭುತ್ವದಲ್ಲಿ ಉಳಿಯುವುದೆಂತು? ಎಂಬುದು ಅವರ ಅಂತರಂಗದ ಕಾಳಜಿ. ಇವರು ಮತ ಪರಿವರ್ತನೆಯನ್ನು ವಿರೋಧಿಸುವವರ ವಿರುದ್ಧ ಗಾಂಧಿ ಪ್ರತಿಮೆಯ ಎದುರು ಮಧ್ಯಾಹ್ನ ಊಟದ ಹೊತ್ತಿನವರೆಗೆ ಉಪವಾಸ ಮಾಡುತ್ತಾರೆ. ಮತ ಪರಿವರ್ತನೆಯನ್ನು ಕಾನೂನಿನಲ್ಲಿ ನಿಷೇಧಿಸಬೇಕೆಂಬ ಬೇಡಿಕೆಯನ್ನು ದಲಿತ ಬುದ್ಧಿಜೀವಿಗಳು ವಿರೋಧಿಸುತ್ತಾರೆ. ತಾವೆಲ್ಲ ಒಟ್ಟಿಗೆ ಕ್ರೈಸ್ತ ಅಥವಾ ಮುಸಲ್ಮಾನರಾಗುತ್ತೇವೆಂಬ ಬೆದರಿಕೆಯ ಅಸ್ತ್ರ ಕಳೆದು ಹೋಗುತ್ತದೆಂಬ ಕಾರಣ ಅವರದು. ಆದರೆ ಕ್ರೈಸ್ತರಾದ ದಲಿತರಿಗೂ ಮೀಸಲಾತಿ ಕೊಡಿಸುವ, ಆ ಮೂಲಕ ಕ್ರೈಸ್ತರಾದರೆ ಮೀಸಲಾತಿ ಹೋಗುತ್ತ ದೆಂಬ ಅಡ್ಡಿಯನ್ನು ನಿವಾರಿಸುವ ಚರ್ಚಿನ ಹುನ್ನಾರವನ್ನು ಇದೇ ದಲಿತ ಬುದ್ಧಿ ಜೀವಿಗಳು ವಿರೋಧಿಸುತ್ತಾರೆ. ದಲಿತ ಕ್ರೈಸ್ತರಿಗೂ ಮೀಸಲಾತಿಯನ್ನು ವಿಸ್ತರಿಸಿದರೆ ದಲಿತರಾಗಿಯೇ ಇರುವ ತಮಗೆ ದೊರೆಯುವ ಈ ಸೌಲಭ್ಯವನ್ನು ಹಂಚಿಕೊಳ್ಳಬೇಕಾಗುವ ಅನನುಕೂಲಕ್ಕೆ ಅವರು ಸಿದ್ಧರಿಲ್ಲ. ಮುಸಲ್ಮಾನರಿಗೂ ಮೀಸಲಾತಿಯನ್ನು ವಿಸ್ತರಿಸಿದ ಆಂಧ್ರದ ಸ್ಯಾಮ್ಯುಯೆಲ್ ರಾಜಶೇಖರ್ ರೆಡ್ಡಿಯದು ಮುಂದೆ ಈ ವಿಸ್ತರಣೆಯನ್ನು ಕ್ರೈಸ್ತರಿಗೆ ಕೊಡುವ ಯೋಜಿತ ತಂತ್ರ. ದಲಿತರಿಗೆಲ್ಲ ತಮ್ಮ ಮನೆಯಿಂದ ಹಿಂದೂ ದೇವದೇವತೆಯರ, ಮಾರಮ್ಮನದೂ ಸೇರಿದಂತೆ, ಪಟಗಳನ್ನು ಹೊರ ಹಾಕಿಸಿ ಬುದ್ಧ ದೀಕ್ಷೆ ಕೊಡಿಸುವ ಚಳವಳಿ ಮಾಡುವ ದಲಿತ ಬುದ್ಧಿ ಜೀವಿಗಳು ಸರ್ಕಾರಿ ದಾಖಲೆಯಲ್ಲಿ ಮಾತ್ರ ದಲಿತ ಜಾತಿ ಎಂದೇ ಬರೆಸುತ್ತಾರೆ. ಪರಿವರ್ತನೆಯನ್ನು ನಿಷೇಧಿಸಬೇಕೆಂದು ಮನವಿ ಅರ್ಪಿಸುವ ಮಠಾಧೀಶರಿಗೆ ಈ ಎಲ್ಲ ತಂತ್ರಗಾರರೂ ‘ಮಠಾಧೀಶರು ತಮ್ಮ ಕೆಲಸ ತಾವು ಮಾಡಿಕೊಂಡಿರಲಿ. ಈ ವಿಷಯಕ್ಕೆ ಬರುವುದು ಬೇಡ" ಎಂದು ಎಚ್ಚರಿಕೆ ನೀಡುತ್ತಾರೆ. ಮಠಾಧೀಶರ ಕೆಲಸವೆಂದರೆ ಚುನಾವಣಾ ಪೂರ್ವದಲ್ಲಿ ರಾಜಕಾರಣಿಗಳು ತಾವು ಕರೆತರುವ ಛಾಯಾಚಿತ್ರಕಾರನ ಎದುರು ಅವರಿಗೆ ಫಲಪುಷ್ಪಗಳನ್ನು ಅರ್ಪಿಸಿ ಪಾದಸ್ಪರ್ಶ ಮಾಡುವಾಗ , ಆಶೀರ್ವಾದ ಸೂಚಕ ಬಲಗೈ ಎತ್ತುವುದು ಮಾತ್ರವೆ?

ನೈತಿಕ ಹೊಣೆ ಯಾರದು?

ಇಂಥ ಸ್ಥಿತಿಯಲ್ಲಿ ಕೆಲವು ಹಿಂದೂ ಯುವಕರು, ಮತ ಪರಿವರ್ತನೆಯು ಅವ್ಯಾಹತವಾಗಿ ನಡೆಯುವ ಪ್ರದೇಶದವರು, ತಾವೇ ಅದನ್ನು ತಡೆಯಲು ಮುಂದೆ ಹೋದಾಗ ಈ ತಂತ್ರಗಾರರು ಮತ್ತು ಮಾಧ್ಯಮದವರು ದೊಡ್ಡ ಗದ್ದಲ ಎಬ್ಬಿಸುತ್ತಾರೆ. ಆ ಮೂಲಕ ಅಂತಾರಾಷ್ಟ್ರೀಯ ಆಧಿಪತ್ಯವುಳ್ಳ ಕ್ರೈಸ್ತರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಅನಾಹುತವಾಗುತ್ತಿದೆ ಎಂಬ ಗದ್ದಲ ಎಬ್ಬಿಸುತ್ತಿದ್ದಾರೆ. ಫ್ರಾನ್ಸ್ ದೇಶದಲ್ಲಿ ಯಾವ ಶಾಲಾ ಮಕ್ಕಳೂ ತಮ್ಮ ಮತ ಲಾಂಛನಗಳನ್ನು ಧರಿಸಬಾರದು. ಎಲ್ಲರಲ್ಲೂ ಭೇದವಿಲ್ಲದೆ ತಾವು ಫ್ರೆಂಚರು ಎಂಬ ಭಾವನೆ ಬೆಳೆಯಬೇಕು ಎಂಬ ಉದ್ದೇಶದಿಂದ ಮುಸ್ಲಿಂ ಹುಡುಗಿಯರು ತಲೆಗೆ ಚೌಕ ಕಟ್ಟುವುದನ್ನೂ ಸಿಖ್ ಹುಡುಗರು ಪೇಟಾ ಕಟ್ಟುವುದನ್ನೂ ನಿಷೇಧಿಸಿದ್ದಾರೆ. ಮೊನ್ನೆ ಫ್ರಾನ್ಸಿಗೆ ಅಲ್ಪಾವಧಿ ಭೇಟಿ ನೀಡಿದ ನಮ್ಮ ಪ್ರಧಾನಿ ಮನಮೋಹನ ಸಿಂಗರು ಸಿಖ್ ಹುಡುಗರಿಗೆ ಪೇಟಾ ಕಟ್ಟಿ ಶಾಲೆಗೆ ಹೋಗುವ ಅವಕಾಶ ಕೊಡುವಂತೆ ಅಧ್ಯಕ್ಷ ಸರ್ಕೋಜಿಗೆ ಮನವಿ ಮಾಡಿದರು. ಆದರೆ ಮಿಶನರಿಗಳ ವಿರುದ್ಧ ಒರಿಸ್ಸಾ ಮತ್ತು ಕರ್ನಾಟಕದ ಕೆಲವು ಕಡೆಗಳಲ್ಲಿ ನಡೆಯುತ್ತಿರುವ ಗಲಭೆಯ ಹಿಂದಿರುವ ಕಾರಣವನ್ನು ವಿವರಿಸದೆ ತಾವು ಸ್ವದೇಶಕ್ಕೆ ಹಿಂತಿರುಗಿದ ತಕ್ಷಣ ಕಠಿಣ ಕ್ರಮ ಕೈಗೊಂಡು ಗಲಭೆಯನ್ನು ಹತ್ತಿಕ್ಕುವುದಾಗಿ ಆಶ್ವಾಸನೆ ಇತ್ತು ಬಂದರು. ದಿಲ್ಲಿಗೆ ಬಂದ ತಕ್ಷಣ ಈ ಗಲಭೆಗಳನ್ನು ಬಳಸಿಕೊಂಡು ಈ ಎರಡು ರಾಜ್ಯಗಳಲ್ಲಿ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆ ಎಂದರೆ ತಮ್ಮದೇ ಆದ ಕಾಂಗ್ರೆಸ್ ಆಳ್ವಿಕೆಯನ್ನು ಹೇರುವ ಹುನ್ನಾರ ನಡೆಸಿದ್ದಾರೆ.
ಪ್ರಜಾಪ್ರಭುತ್ವಾತ್ಮಕವಾಗಿ, ಕಾನೂನು ಸಮ್ಮತವಾದ ವಿಧಾನಗಳಿಂದ ಮತಾಂತರದ ಪಿಡುಗನ್ನು ತಡೆಯುವುದು ಸಾಧ್ಯವಿಲ್ಲವೆಂಬ ಸ್ಥಿತಿಯಲ್ಲಿ ಕೆಲವರಾದರೂ ಹತಾಶರು ಹಿಂಸಾ ಮಾರ್ಗಕ್ಕೆ ಇಳಿದು, ಹಿಂಸಾ ಮಾರ್ಗದ ಪರಿಣಾಮದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಭೂಗತ ಮಾರ್ಗವನ್ನು ಆರಂಭಿಸಿದರೆ ಅದಕ್ಕೆ ನೈತಿಕ ಹೊಣೆ ಯಾರದು? ಮುಸ್ಲಿಂ ಭಯೋತ್ಪಾದಕರನ್ನು ನಿವಾರಿಸುವ ಇಚ್ಛೆಯಾಗಲಿ, ಶಕ್ತಿಯಾಗಲಿ ಸರ್ಕಾರ ಮತ್ತು ರಾಜಕೀಯ ಪಕ್ಷಗಳಿಗೆ ಇಲ್ಲದಿರುವಾಗ ತಾವೇ ಯಾಕೆ ದೇಶದ ಸಂಸ್ಕೃತಿಯ ರಕ್ಷಣೆಯ ಮಾರ್ಗಗಳನ್ನು ಹುಡುಕಬಾರದು ಎಂಬ ವಿಚಾರದ ಜನರು ಇಲ್ಲವೆ? ಸೆಪ್ಟೆಂಬರ್ ೧೧ರ ನಂತರ ಅಮೆರಿಕದಲ್ಲಿ ಒಂದೇ ಒಂದು ಭಯೋತ್ಪಾದನೆ ನಡೆದಿಲ್ಲ. ನಮ್ಮಲ್ಲಿ ಪ್ರತಿದಿನ ಒಂದಲ್ಲ ಒಂದು ಊರಿನಲ್ಲಿ ಹತ್ತಿಪ್ಪತ್ತು ಮೂವತ್ತು ಐವತ್ತು ಜನರನ್ನು ಸಾಯಿಸುತ್ತಲೇ ಇದ್ದಾರೆ. ಏನಕೇನಪ್ರಕಾರೇಣ ಅಧಿಕಾರ ಹಿಡಿದುಕೊಂಡಿರುವ ರಾಜಕಾರಣಿಗಳು ಇದನ್ನು ತಡೆಯುವುದು ಕನಸಿನ ಮಾತು. ಸತತ ಭಯೋತ್ಪಾದನೆಯಿಂದ ದೇಶದ ಧೃತಿಯನ್ನು ಉಡುಗಿಸಿ ಆನಂತರ ಎಲ್ಲ ಕಡೆಗಳಲ್ಲೂ ಏಕಕಾಲದಲ್ಲಿ ಬೆಂಕಿ ಹಚ್ಚಿ ಅಧಿಕಾರ ಹಿಡಿಯುವ ತಂತ್ರ ಭಯೋತ್ಪಾದಕರದು. ಲೆನಿನ್ ಮಾಡಿದ್ದೂ ಇದೇ ತಂತ್ರವನ್ನು, ಮಾವೋ ಮಾಡಿದ್ದೂ ಇದೇ ತಂತ್ರವನ್ನು, ನೇಪಾಳದ ಪ್ರಚಂಡನದೂ, ನಮ್ಮ ನಕ್ಸಲೀಯರದೂ ಇದೇ ತಂತ್ರ, ಇದೇ ವಿಧಾನ. ಈ ಹತಾಶೆ ಹಿಂದೂಗಳಲ್ಲಿಲ್ಲವೆ? ಅವರಲ್ಲಿ ಕೆಲವರಾದರೂ ಹತಾಶೆಯ ದಾರಿ ಹಿಡಿದರೆ ಸಮೂಹ ಖಂಡನೆಯಿಂದ ಅದನ್ನು ತಡೆಯಲು ಸಾಧ್ಯವೇ?

ಜಾತಿ ಆಧಾರದ ಮೇಲೆ ಅಧಿಕಾರ ಹಿಡಿಯುವ ರಾಜಕಾರಣಿಗಳು, ಮಾಧ್ಯಮದವರು, ಬುದ್ಧಿಜೀವಿಗಳನ್ನೆಸಿಕೊಳ್ಳುವವರು ಈ ಅತ್ಯಂತ ಜವಾಬ್ದಾರಿಯ ಪ್ರಶ್ನೆಯನ್ನು ಸ್ವಲ್ಪವಾದರೂ ಜವಾಬ್ದಾರಿಯಿಂದ ಚಿಂತಿಸಿ, ತುಸುವಾದರೂ ಪ್ರಾಮಾಣಿಕತೆಯಿಂದ ವರ್ತಿಸಬೇಕು.

ಫ್ರಾಂಕ್ವಾಗೋತಿಯೇ ತಮ್ಮ ಲೇಖನವನ್ನು ಈ ವಾಕ್ಯಗಳಿಂದ ಮುಗಿಸುತ್ತಾರೆ. “ಸೋನಿಯಾಗಾಂಧಿಯ ಚುಕ್ಕಾಣಿಯಲ್ಲಿ ನಾವು ಕ್ರೈಸ್ತ ಇಂಡಿಯಾದೆಡೆಗೆ ಸಾಗುತ್ತಿದ್ದೇವೆಯೆ? ಅದು ಭಾರತಕ್ಕೆ ಮಾತ್ರವಲ್ಲ. ಪ್ರಪಂಚಕ್ಕೇ ಬಹು ದೊಡ್ಡ ನಷ್ಟವಾಗುತ್ತದೆ. ಏಕೆಂದರೆ ಈ ಗ್ರಹದಲ್ಲಿ ಜೀವಂತವಾಗಿರುವ ಅಧ್ಯಾತ್ಮವು ಭಾರತದಲ್ಲಿ ಮಾತ್ರ ಇದೆ.”

-ಮುಕ್ತಾಯ


ಈ ವಿಷಯದಲ್ಲಿ ಆಸಕ್ತಿಯುಳ್ಳವರು ಕೆಳಗಿನ ಗ್ರಂಥಗಳನ್ನು ಪರಾಮರ್ಶಿಸಬಹುದು
1. ARUN SHOURIE : HARVESTING OUR SOULS (ASA)
2. ARUN SHOURIE : MISSIONARIES IN INDIA (ASA)
3. MATILDA JOSLYN GAGE : WOMAN, CHURCH AND STATE (VOICE OF INDIA, NEW DELHI)
4. SITARAM GOEL : CATHOLIC ASHRAMS Sannyasins or Swindlers? (VOICE OF INDIA)
5. SITARAM GOEL : HISTORY OF HINDU-CHRISTIAN ENCOUNTERS (A.D.304 to 1996) (VOICE OF INDIA.NEW DELHI)
6. ಡಾ.ನವರತ್ನ ಎಸ್.ರಾಜಾರಾಂ : ಕ್ರೈಸ್ತ ಮತದ ಉಗಮ ಮತ್ತು ಸದ್ಯಃ ಸ್ಥಿತಿ(ಹೊಸ ಶೋಧಗಳು) ಜಾಗರಣ ಪ್ರಕಾಶನ, ಬೆಂಗಳೂರು.
7. ಡಾ.ನವರತ್ನ ಎಸ್.ರಾಜಾರಾಂ : Dead Sea Scrolls and The Crisis of Christianity (Minerra press London)
8. N.S.Rajaram : Profiles in Deception; Ayodhya and the Dead Sea Scrolls (Voice of India)
9. N.S.Rajaram : Christianity is Collapsing Empire and its Designs in India (Hindu Writers Forum, New Delhi)

ಮಕ್ಕಳ ವಿಭಾಗದಲ್ಲಿ ಹೀಗಾ ಬರಿಯೋದು?

ವಿಕ್ರಾಂತಕರ್ನಾಟಕ ಕನ್ನಡ ಪತ್ರಿಕೆ (ಜುಲೈ ೧೮, ೨೦೦೮) ಆಟ-ಪಾಠ ಮಕ್ಕಳ ವಿಭಾಗದಲ್ಲಿ ಈ ಲೇಖನ ಬಂದಿದೆ.


“... ಹಿಂದೂ ವಾಯ್ಸ್” ಎಂಬ ಬುದ್ದಿಗೇಡಿ ಪತ್ರಿಕೆ ಸುಳ್ಳು ಹರಡುತ್ತಿದೆ. ...ರೀಲು ಬಿಡುತ್ತಿದೆ. ... ಉಗ್ರ ಹಿಂದುತ್ವವಾದಿಗಳಿಗೆ ಉಗಿಯುತ್ತಲೇ ಇದ್ದಾರೆ... ” “ರಾಮಾಯಣ ಮಹಾಭಾರತಗಳು ಭಾರತೀಯರು ಗೌರವಿಸುವ ಮಹಾನ್ ಪುರಾಣಗಳು. ಅವು ನಡೆದ ಘಟನೆಗಳಲ್ಲ...”

ಸ್ವಾಮೀ ವಿಕ್ರಾಂತಕರ್ನಾಟಕದ ಸಂಪಾದಕರೇ... ಮಕ್ಕಳ ವಿಭಾಗದಲ್ಲಿ ಬರೆಯೋ ರೀತೀನಾ ಇದು? ನಿಮ್ಮ ಎಡಪಂಥೀಯ ಜಗಳಾನ ಮಕ್ಕಳ ಆಟದ ಮೈದಾನಕ್ಕೂ ತರಬೇಡಿ. ಅವರ ಮನಸ್ಸನ್ನು ಹೊಲಸು ಮಾಡಬೇಡಿ.

ರಾಮಾಯಣ ನಡೀತೋ ಇಲ್ವೋ, ಆದ್ರೆ ರಾಮನನ್ನ ದೇವರು ಅಂತ ನಾವು ಪೂಜಿಸ್ತೀವಿ. ನಮ್ಮ ಮಕ್ಕಳು ದೊಡ್ಡೋರಾದ ಮೇಲೆ ದೇವ್ರನ್ನ ನಂಬ್ತಾರೋ ಬಿಡ್ತಾರೋ ಅದು ಅವ್ರಿಗೆ ಬಿಟ್ಟದ್ದು. ಅದುಬಿಟ್ಟು ಈಗ್ಲಿಂದಾನೇ ರಾಮ ನಿಜವಾದ ವ್ಯಕ್ತಿಯಲ್ಲಾ, ದೇವರಿಲ್ಲ... ಅಂತ ವಿಷವುಣಿಸೋ ಕಮ್ಯುನಿಸ್ಟ್ ದುರ್ಬುದ್ದಿ ಯಾಕೆ?

ಎಲ್ಲಾ ಧರ್ಮಗಳಲ್ಲೂ ದೇವರ ಬಗ್ಗೆ ಕಾಲ್ಪನಿಕ ಕಥೆಗಳು, ಅತಿಮಾನುಷ ಪ್ರಸಂಗಗಳು ಇದ್ದದ್ದೇ. ನಾವು ರಾಮಸೇತುವೆ ಬಗ್ಗೆ ಮಾತಾಡಿದ್ರೆ ಹುಬ್ಬೇರಿಸೋ ಈ ಜನ್ರಿಗೆ ನ್ಯಾಷನಲ್ ಜಿಯೋಗ್ರಫಿಕ್ಸ್ ನೋರು ನೋಹಾನ ನೌಕೆ ಹುಡುಕೋ ಪ್ರಯತ್ನ ಮಾಡೋದು ತಮಾಶಿ ಅನ್ಸಲ್ವಾ?

ಅಂದಹಾಗೆ, ಮೇಲಿನ ಚಿತ್ರದಲ್ಲಿ ಘಟೋತ್ಕಚನ ಅಸ್ಥಿಪಂಜರಾನ ಮೂಡಿಸೋ ಕೆಲಸ ಯಾರೋ ಚೆನ್ನಾಗಿ ಮಾಡಿದ್ದಾರೆ!